ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಕಟೀಲು ಮನೋಹರ ಪೈ (81) ಶುಕ್ರವಾರದಂದು ನಿಧನರಾದರು.
ಸಸ್ಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವುಳ್ಳ ಅವರು ಉತ್ತಮ ಕ್ರೀಡಾಪಟುವಾಗಿ, ಕನ್ನಡ, ಇಂಗ್ಲೀಷ್ ಸಾಹಿತ್ಯ ಅಧ್ಯಯನದ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಪರಿಸರ ರಕ್ಷಣೆ ಬಗ್ಗೆ ಬಹಳ ಕಾಳಜಿವುಳ್ಳವರಾಗಿ ಸಮಾನ ಮನಸ್ಕರೊಂದಿಗೆ ಅಭಿಯಾನ ನಡೆಸಿದವರು. ರೋಟರಿ ಕುಂದಾಪುರ ದಕ್ಷಿಣದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದವರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರದ ಪ್ರಸಿದ್ಧ ಕಟೀಲು ಮನೆತನದ ಸದಸ್ಯರಾಗಿದ್ದ ಅವರು ಸ್ನೇಹಪರ ನಡವಳಿಕೆಯಿಂದ ಸಮಾಜದಲ್ಲಿ ಜನಪ್ರಿಯರಾಗಿದ್ದರು.
ಅವರು ಪತ್ನಿ ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಹಲವು ಗಣ್ಯರು ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

