ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತಿಯ 2025-26ನೇ ಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯು ಇಲ್ಲಿನ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಮಂಗಳವಾರ ನಡೆಯಿತು.
ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಕುಂದಾಪುರದ ವಕೀಲೆ ಮಲ್ಲಿಕಾ ಜಯಂತ್ ಕಾನೂನು ಮಾಹಿತಿ ನೀಡಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿಯ ಮುಖ್ಯ ಶಿಕ್ಷಕಿ ಚಂದ್ರಕಲಾ ಅವರು ಮಕ್ಕಳ ಹಕ್ಕುಗಳ ಕಾನೂನು ಮಾಹಿತಿ ಮತ್ತು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಅವರು ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡನೇ ರ್ಯಾಂಕ್ ಪಡೆದ ಸುಶ್ಮಿತಾ, ಶೈಕ್ಷಣಿಕ ಸಾಧಕರಾದ ಮನಾಲಿ, ಸುಮಂತ್ ಖಾರ್ವಿ ಮತ್ತು ಹಿಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಸೈ ನವೀನ್, ಅಂಗನವಾಡಿ ಮೇಲ್ವಿಚಾರಕಿ ರೇಖಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಜನ್ಯ ಮತ್ತು ಶ್ರೀಶನ್, ಗ್ರಾಪಂ ಕಾರ್ಯದರ್ಶಿ ಅನುಪ್ ಶೇಟ್, ಗ್ರಾಪಂ. ಸದಸ್ಯರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಪಂ. ಸಿಬ್ಬಂದಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು.
ಎಸ್.ವಿ. ಶಾಲೆಯ ಮೈದಾನದಲ್ಲಿನ ತ್ಯಾಜ್ಯ ವಿಲೇವಾರಿ ಮಾಡಬೇಕು, ಶಾಲೆಯ ವಠಾರದಲ್ಲಿ ಬಿಡಾಡಿ ದನಕರುಗಳ ಕಾಟವನ್ನು ಹಾಗೂ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು, ಶಾಲೆಯ ವಠಾರದಲ್ಲಿ ಸಾರ್ವಜನಿಕರು ತಿರುಗಾಡದಂತೆ ಕ್ರಮಕೈಗೊಳ್ಳಬೇಕು, ಮಳೆಗಾಲದಲ್ಲಿ ರಸ್ತೆಯ ಮೇಲೆ ವಿಪರೀತ ನೀರು ನಿಂತು ಸಾರ್ವಜನಿಕರು ಮತ್ತು ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು, ಬಸ್ಸುಗಳಲ್ಲಿ ಮಿತಿಮೀರಿದ ಪ್ರಯಾಣಿಕರು ಮತ್ತು ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿರುವುದನ್ನು ನಿಲ್ಲಿಸಬೇಕು, ಶಾಲೆ ಪ್ರಾರಂಭ ಮತ್ತು ಬಿಡುವ ಸಮಯದಲ್ಲಿ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸ.ವಿ.ಪದವಿಪೂರ್ವ ಪ್ರೌಢಶಾಲೆಯ ವಿದ್ಯಾರ್ಥಿ ಶ್ರೇಜಸ್ ಮತ್ತು ಸರಕಾರಿ ಉರ್ದು ಶಾಲೆಯ ವಿದ್ಯಾರ್ಥಿ ಆಯಿಷಾ ಆಗ್ರಹಿಸಿದರು. ಮುಖ್ಯ ರಸ್ತೆ ಹಾಗೂ ಒಳರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ವಾಹನಗಳ ವೇಗಕ್ಕೆ ನಿಯಂತ್ರಣ ಹಾಕಬೇಕು ಮತ್ತು ರಸ್ತೆಗಳಲ್ಲಿ ಹಂಪ್ಸ್ ನಿರ್ಮಿಸಬೇಕು ಎಂದು ಸ್ಟೆಲ್ಲಾ ಮಾರೀಸ್ ಶಾಲೆಯ ವಿದ್ಯಾರ್ಥಿ ಮನವಿ ಮಾಡಿದರು.
ಗ್ರಾಪಂ ಪಿಡಿಒ ರವಿ ಸ್ವಾಗತಿಸಿದರು. ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಕಾರ್ಯಕ್ರಮ ನಿರ್ವಹಿಸಿದರು.