Site icon Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯದಲ್ಲಿ ಅಗ್ನಿಶಾಮಕ & ತುರ್ತು ಸೇವೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕಾರ್ಯಾಚರಣೆಗೆ ಅಡ್ಡಿ: ಶಾಸಕ ಗಂಟಿಹೊಳೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೆಂಗಳೂರು:
ರಾಜ್ಯದಲ್ಲಿ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಆಕಸ್ಮಿಕ ಅಗ್ನಿ ಅವಘಡಗಳ ಸಮಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗುತ್ತಿರುವ ಕಾರಣ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಮಾಡುವ ಬಗ್ಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಸ್ತಾಪ ಮಾಡಿದ್ದಾರೆ.

ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಪರಮೇಶ್ವರ್ ಅವರು  ಕರ್ನಾಟಕ ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 1763 ಹುದ್ದೆಗಳನ್ನು ನೇಮಕ ಮಾಡಲು ಅನುಮತಿ ನೀಡುವ ಪ್ರಸ್ತಾವನೆಯ ಸಹಮತಿಗಾಗಿ ಆರ್ಥಿಕ ಇಲಾಖೆಗೆ  ಕಡತ ಸಲ್ಲಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಗ್ನಿ ಶಾಮಕ ದಳವನ್ನು ಮೇಲ್ದರ್ಜೆ ಗೇರಿಸಲು ಮತ್ತು  ಹೊಸ ಅಗ್ನಿ ಶಾಮಕ ಠಾಣೆಗಳ ಬೇಡಿಕೆ ಪೂರೈಸಲು ಸರ್ಕಾರ ಕೈಗೊಂಡ ಕ್ರಮಗಳ ಬಗೆಗಿನ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು ಉಡುಪಿ ಜಿಲ್ಲೆಯಲ್ಲಿ ಅಗ್ನಿ ಶಾಮಕ ದಳವನ್ನು ಮೇಲ್ದರ್ಜೆಗೇರಿಸಲು ಹಾಗೂ ಹೊಸ ಅಗ್ನಿ ಶಾಮಕ ಠಾಣೆ ಬೇಡಿಕೆ ಪೂರೈಸುವ ಕುರಿತಾದ  ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಅಗ್ನಿ ಶಾಮಕ ಹಾಗೂ ತುರ್ತು ಸೇವಗಳ ಇಲಾಖೆಯಲ್ಲಿ ಮಂಜೂರಾದ ಒಟ್ಟು ಹುದ್ದೆಗಳು: 7159, ಭರ್ತಿಯಾದ ಹುದ್ದೆಗಳ ಸಂಖ್ಯೆ: 5113, ಖಾಲಿ ಹುದ್ದೆಗಳು: *2046 ( ಶೇಕಡಾ 28 ರಷ್ಟು), ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶೇಕಡಾ 45 ರಷ್ಟು ಹುದ್ದೆಗಳು ಖಾಲಿ! ಮಂಜೂರಾದ ಒಟ್ಟು ಹುದ್ದೆ : 393, ಭರ್ತಿಯಾದ ಹುದ್ದೆ : 215, 178 ಖಾಲಿ ಇದೆ ಎಂದು ಸಚಿವರು ತಿಳಿಸಿದ್ದಾರೆ.

Exit mobile version