Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ರಾಷ್ಟ್ರಮಟ್ಟದ ಗ್ರೀನ್‌ ಸ್ಕೂಲ್ ಅವಾರ್ಡ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶುದ್ಧ ಪರಿಸರದಲ್ಲಿ ನಿರ್ಮಿತವಾದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ತನ್ನ ಪರಿಸರಸ್ನೇಹಿ ಕಾರ್ಯಗಳ ಮೂಲಕ ಸತತ ನಾಲ್ಕನೆಯ ಬಾರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಗ್ರೀನ್ ಸ್ಕೂಲ್ ಅವಾರ್ಡನ್ನು ತನ್ನದಾಗಿಸಿಕೊಂಡು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಪ್ರಶಸ್ತಿಯನ್ನು ಪಡೆದ ಉಡುಪಿ ಜಿಲ್ಲೆಯ ಏಕೈಕ ಶಾಲೆ ಎಂಬ ಹಿರಿಮೆಗೆ ಪಾತ್ರವಾಯಿತು.

ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್‌ಇ) ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿ 20,000 ಕ್ಕೂ ಹೆಚ್ಚು ಶಾಲೆಗಳು ಸ್ಪಧೆಯಲ್ಲಿ ಭಾಗವಹಿಸಿದ್ದವು. ಶುದ್ಧ ಗಾಳಿ, ಇಂಧನ, ಆಹಾರ, ಭೂಮಿ, ನೀರು, ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆಯ ಮಾನದಂಡದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ನವದೆಹಲಿಯಲ್ಲಿ ನಡೆದ ದಿ ಗ್ರೀನ್ ಸ್ಕೂಲ್ಸ್ ಕಾರ್ನಿವಲ್ 2026ರ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಸಂಗೀತಾ ಕೆ.ಆರ್. ಹಾಗೂ ವಿದ್ಯಾ ಅಮೀನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ವಿದ್ಯಾರ್ಥಿಗಳಾದ ವಿಹಾನ್ ಹಂಚಿನಾಳ, ಗೌರೀಶ್ ಬಸವರಾಜ, ರಾಹುಲ್ ಉಳ್ಳೂರು, ನೇಚರ್ ಇನ್ ಫ್ರೇಮ್ಸ್ ಹಾಗೂ ದಿ ಗ್ರೀನ್ ಪಿಚ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೃಜನಶೀಲತೆಯನ್ನು ಪ್ರದರ್ಶಿಸಿದರು. 

ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ನ ಮಹಾ ನಿರ್ದೇಶಕರಾದ ಸುನೀತಾ ನರೇನ್ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಗ್ರೀನ್ ಸ್ಕೂಲ್ ಅವಾರ್ಡ್ ನಮ್ಮ ಸಂಸ್ಥೆಗೆ ತಂದ ಅತ್ಯುನ್ನತ ಗೌರವವಾಗಿದ್ದು, ನಮ್ಮ ಸಂಸ್ಥೆಯಲ್ಲಿರುವ ಸುಸಜ್ಜಿತ ವ್ಯವಸ್ಥೆಗಳೇ ಈ ಪ್ರಶಸ್ತಿ ಪಡೆಯುವಲ್ಲಿ ಪ್ರದಾನ ಪಾತ್ರ ವಹಿಸಿವೆ. ಸಮಾಜದಲ್ಲಿ ಮರಗಳ ನಾಶ ನಿರಂತರವಾಗಿ ಸಾಗುತ್ತಿದ್ದು, ಅರಣ್ಯ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಶಾಲೆಗಳಲ್ಲಿ ನಿರಂತರವಾಗಿ ನಡೆಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಸಸ್ಯ ಪ್ರೀತಿಯನ್ನು ಹುಟ್ಟಿಸುವ ಉದ್ದೇಶದಿಂದ ಕೈದೋಟವನ್ನು, ವಿವಿಧ ಸಸ್ಯಗಳಿಂದ ಕೂಡಿದ ವನಗಳನ್ನು ನಿರ್ಮಿಸಿದ್ದು, ಅಲ್ಲಿ ಬೆಳೆದಿರುವ ತರಕಾರಿಗಳನ್ನು, ಔಷಧೀಯ ವಸ್ತುಗಳನ್ನು ನಿತ್ಯದ ಅಡುಗೆಗೆ ಬಳಸಲಾಗುತ್ತಿದೆ. ಶೈಕ್ಷಣಿಕ ಚಟುವಟಿಕೆಗಳ ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತಾಗಿ ಮಾಹಿತಿ ಒದಗಿಸಿ, ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ – ಶರಣ ಕುಮಾರ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ  ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರು

Exit mobile version