Kundapra.com ಕುಂದಾಪ್ರ ಡಾಟ್ ಕಾಂ

ಕಟ್‌ಬೇಲ್ತೂರಿನಲ್ಲಿ ರೈತರ ದಿನಾಚರಣೆ

ಕುಂದಾಪುರ: ತೆಂಗು ಬೆಳೆಗಾರರ ಫೆಡರೇಶನ್ ಕಟ್‌ಬೇಲ್ತೂರು, ರೋಟರಿ ಕ್ಲಬ್ ಕುಂದಾಪುರ, ಮಹಾವಿಷ್ಣು ಯುವಕ ಮಂಡಲ ಹರೆಗೋಡು ಕಟ್‌ಬೇಲ್ತೂರು ಹಾಗೂ ಶ್ರೀ ಜನನಿ ಸ್ವಸಹಾಯ ಸಂಘ ಹರೆಗೋಡು ಇವರ ಸಂಯುಕ್ತ ಆಶ್ರಯದಲ್ಲಿ ರೈತರ ದಿನಾಚರಣೆ ಕಾರ್ಯಕ್ರಮ ಕಟ್‌ಬೇಲ್ತೂರಿನ ಮಹಾವಿಷ್ಣು ಯುವಕ ಮಂಡಲದ ವಠಾರದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಕೆ.ಆರ್.ನಾಯ್ಕ್, ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಜನರ ಅಭಾವ ಸೃಷ್ಟಿಯಾಗುತ್ತಿದೆ. ಯುವ ಜನರು ಪಟ್ಟಣ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.

ಕಟ್‌ಬೇಲ್ತೂರು ತೆಂಗು ಬೆಳೆಗಾರರ ಫೆಡರೇಶನ್‌ನ ಅಧ್ಯಕ್ಷ ಚಂದ್ರ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ತೆಂಗು ಬೆಳೆಗಾರರರ ಫೆಡರೇಶನ್‌ನ ಕಾರ್ಯದರ್ಶಿ ನರಸಿಂಹ ಗಾಣಿಗ ಶುಭ ಹಾರೈಸಿದರು. ಕೃಷಿಕರಾದ ಸೇಸು ಗಾಣಿಗ, ಬಾಬು ಪೂಜಾರಿ, ನಾಗೇಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಸಹಾಯ ಸಂಘದ ಸದಸ್ಯೆ ಸುನೀತಾ ಸ್ವಾಗತಿಸಿದರು. ಸುಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಅಧ್ಯಕ್ಷ ರವೀಶ್ ಡಿ.ಎಚ್. ವಂದಿಸಿದರು.

Exit mobile version