ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿರುವುದು, ಅವರೊಂದಿಗೆ ಸಂವಾದ ನಡೆಸಿರುವುದು ನಿಜಕ್ಕೂ ಒಂದು ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಭಿಪ್ರಾಯಿಸಿದ್ದಾರೆ.

ಅವರು ಹರ್ಕೂರು ಗ್ರಾಮದ ನಾರ್ಕಳಿ ಮದುಕೊಡ್ಲು ಪರಿಸರದ ಕೊರಗ ಸಮುದಾಯ ಬಂಧುಗಳ ಮನೆಯಲ್ಲಿ ಗ್ರಾಮ ವಾಸ್ತವ್ಯ ಕೈಗೊಂಡ ವೇಳೆ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ. ಕೊರಗ ಸಮುದಾಯದ ಬಗ್ಗೆ ವಿಶೇಷ ಒಲವು ಹೊಂದಿರುವ ಗಂಟಿಹೊಳೆ ಅವರ ಬಗ್ಗೆ ಮದುಕೊಡ್ಲು ಪರಿಸರದ ಕೊರಗ ಸಮುದಾಯ ಬಂಧುಗಳು ಇದೇ ವೇಳೆ ಅಭಿಮಾನ ವ್ಯಕ್ತಪಡಿಸಿದರು.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಗಂಟಿಹೊಳೆ ಅವರು, ಸಮಾಜದ ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತಿರುವ ಕೊರಗ ಸಮಾಜವನ್ನು ಹಿಂದೂ ಸಮಾಜ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದೆ. ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೊಸ ಪ್ರೇರಣೆಯನ್ನು ನೀಡಿದೆ ಮಾತ್ರವಲ್ಲದೆ ಅವರ ನೋವು ನಲಿವುಗಳನ್ನು ಅರಿತುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ಬರೆದಿದ್ದಾರೆ.