ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಫೀಲ್ಡ್ ಟ್ರಿಪ್ ಹಮ್ಮಿಕೊಳ್ಳಲಾಯಿತು.

ಮಕ್ಕಳನ್ನು ಸ್ಥಳೀಯ ಪ್ರದೇಶಗಳಾದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಿಗೆ ಕರೆದುಕೊಂಡು ಹೋಗಲಾಯಿತು. ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಅಲ್ಲಿಗೆ ಬರುವ ಹಾಗೂ ಅಲ್ಲಿಂದ ತೆರಳುವ ಬಸ್ಸುಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಬಸ್ಸು ನಿಲ್ದಾಣದ ಕಾರ್ಯವೈಖರಿಯನ್ನು ತಿಳಿಸಿ ಹೇಳಲಾಗಿದ್ದು, ಅವರು ಪ್ರಯಾಣಿಕರ ಚಲನವಲನವನ್ನು ಗಮನಿಸಿದರು. ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ತೆರಳಿದ ವಿದ್ಯಾರ್ಥಿಗಳು ಶಿಸ್ತಿನಿಂದ ಕುಳಿತು ರೈಲಿನ ಆಗಮನವನ್ನು ನಿರೀಕ್ಷಿಸಿದರು. ಮಕ್ಕಳಿಗೆ ಹೋಗಿ ಬರುವ ಎರಡು ರೈಲುಗಳನ್ನು ಕಾಣುವ ಅವಕಾಶ ಲಭಿಸಿದ್ದು, ಪ್ರಯಾಣದ ಸುರಕ್ಷತೆಗಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕುರಿತು ಅವರಿಗೆ ಮನದಟ್ಟು ಮಾಡಿಕೊಡಲಾಯಿತು.
ವಿದ್ಯಾರ್ಥಿಗಳ ಜೊತೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸುಜಾತಾ ಸದಾರಾಮ್, ಶಿಕ್ಷಣ ಸಂಯೋಜಕಿಯರಾದ ದೀಪಿಕಾ ದೇವಾಡಿಗ ಹಾಗೂ ಫರ್ನಾಜ್, ದೈಹಿಕ ಶಿಕ್ಷಕರಾದ ಗಣೇಶ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರು ಉಪಸ್ಥಿತರಿದ್ದರು.