ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬದುಕಿನಲ್ಲಿ ಎರಿಳಿತಗಳು ಸಹಜ. ಸಾಂಸ್ಕೃತಿಕ ಕ್ಷೇತ್ರದ ಪಯಣಗಳು ಜೀವನಾನುಭವ ನೀಡುತ್ತದೆ. ಮಾತ್ರವಲ್ಲದೆ ನನ್ನಂಥ ಸಾವಿರಾರು ಜನರಿಗೆ ಬದುಕು ನೀಡಿದೆ. ನೂರಾರು ಶ್ರೇಷ್ಟ ಪ್ರಶಸ್ತಿಗಳನ್ನು ಪಡೆದಿದ್ದರು ಸಹ ಜನರ ನಡುವೆ ಗುರುತಿಸಿ ದೊರೆಯುವ ಗೌರವ ಅತೀ ಶ್ರೇಷ್ಟವಾಗಿರುತ್ತದೆ. ಬಿಂದುಶ್ರೀ ಪ್ರಶಸ್ತಿ ಸಾರ್ಥಕತೆಯ ಸಂತೃಪ್ತಿಯಾಗಿದೆ. ಜೀವನದ ಕೊನೆ ಉಸಿರಿರುವ ತನಕ ಕಲಾ ಸೇವೆಯ ಮೂಲಕ ಸಮಾಜದ ಋಣ ತೀರಿಸುವ ಜವಬ್ದಾರಿ ಇದೆ ಎಂದು ರಂಗಭೂಮಿ ಕಲಾವಿದೆ ಹಾಗೂ ಹಿರಿಯ ಚಲನಚಿತ್ರ ನಟಿ ಉಮಾಶ್ರೀ ಹೇಳಿದರು.

ಅವರು ಸುರಭಿ ರಿ. ಬೈಂದೂರು ಸಾಂಸ್ಕೃತಿಕ, ಸಾಹಿತ್ಯ ಸೇವಾ ಪ್ರತಿಷ್ಠಾನ ಇದರ 26ನೇ ವರ್ಷದ ಅಂಗವಾಗಿ ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಿಯ ಸಾಂಸ್ಕೃತಿಕೋತ್ಸವದ ಪ್ರಯುಕ್ತ ಬೈಂದೂರು ಶಾರದಾ ವೇದಿಕೆಯಲ್ಲಿ ಎರಡನೇ ದಿನದ ಸುರಭಿ ಜೈಸಿರಿ 2026ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸ್ವೀಕರಿಸಿ ಮಾತನಾಡಿದರು.
ಬೈಂದೂರು ಶಾಸಕ ಗುರುರಾಜ ಗಂಟೆಯೊಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ನಿವೃತ್ತ ಹಿರಿಯ ಶಾಖಾ ಪ್ರಬಂಧಕ ಹೆಚ್. ವಸಂತ ಹೆಗ್ಡೆ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಪ್ರಸಾದ ಪ್ರಭು, ಉಪ್ಪುಂದ ಅಶೋಕ ಜ್ಯುವೆಲಲ್ಸ್ ಮಾಲಕ ಅನಿಲ್ ಶೇಟ್, ಗಣಪತಿ ಹೋಬಳಿದಾರ್, ಸುರಭಿ ನಿರ್ದೇಶಕ ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಉಪಸ್ಥಿತರಿದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್ ಶುಭಸಂಸನೆ ಗೈದರು.