ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಕಿರಿಮಂಜೇಶ್ವರ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪಂಚ ಗ್ಯಾರೆಂಟಿ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮವು ಇತ್ತೀಚಿಗೆ ನಾಗೂರಿನಲ್ಲಿ ಜರುಗಿತು.

ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮೋಹನ್ ಪೂಜಾರಿ ಉಪ್ಪುಂದ ಮಾತನಾಡಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಮತ್ತು 5 ಗ್ಯಾರೆಂಟಿ ಯೋಜನೆಯಿಂದ ಬೈಂದೂರು ತಾಲೂಕಿನ ಮತ್ತು ಕಿರಿಮಂಜೇಶ್ವರ ಗ್ರಾಮದ ಮಹಿಳೆಯರು ಪಡೆದುಕೊಂಡ ಒಟ್ಟು ಮೊತ್ತದ ವಿವರ ಹಾಗೂ ಮುಂದೆ ಗೃಹಲಕ್ಷ್ಮಿ ಯೋಜನೆಯ ಫಲನುಭವಿಗಳ ಸ್ವ ಸಹಾಯ ಗುಂಪುಗಳ ರಚನೆಯ ಬಗ್ಗೆ ಪ್ತಾಸ್ತವಿಕ ಮಾತುಗಳನ್ನಾಡಿದರು.
ಮಹಿಳೆಯರ ಸಬಲೀಕರಣ ಮತ್ತು ಸರಕಾರದ ಪಂಚ ಗ್ಯಾರೆಂಟಿ ಯೋಜನೆ ಮಹಿಳೆಯರ ಆರ್ಥಿಕ ಸಬಲೀಕರಣದ ಮೇಲೆ ಬೀರಿದ ಪರಿಣಾಮದ ವಿವರವಾದ ಮಾಹಿತಿಯನ್ನು ಉದಾಹರಣೆ ಸಹಿತ ವಿವರಿಸಿದ ಖ್ಯಾತ ಆಯುರ್ವೇದ ತಜ್ಞೆ ಡಾl ಸೋನಿ ಡಿ. ಕಾಸ್ಟ ಗ್ರಾಮೀಣ ಭಾಗದ ಮಹಿಳೆಯರು 5 ಯೋಜನೆಯನ್ನು ಸ್ವಾವಲಂಬನೆ ಮತ್ತು ಸದೃಢ ಜೀವನ ನೆಡೆಸಲು ಹೇಗೆ ಸಹಕಾರಿ ಆಯಿತು, ಈ ಯೋಜನೆಯಿಂದ ಭವಿಷ್ಯದ ಜೀವನವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ತಿಳುವಳಿಕೆಯೊಂದಿಗೆ, ಮಹಿಳೆಯರು ಕುಟುಂಬದ ಆರೈಕೆಯೊಂದಿಗೆ ತಮ್ಮ ಆರೋಗ್ಯ ಸುಧಾರಣೆಯತ್ತ ಕಾಳಜಿ ವಹಿಸಿಕೊಳ್ಳುವುದು ಅತೀ ಮುಖ್ಯ ಆದುದರಿಂದ ತಾವೆಲ್ಲರೂ ಅವಾಗವಾಗ ನಿಮ್ಮ ಹತ್ತಿರದ ಸರಕಾರಿ ಆಷ್ಪತ್ರೆಗೆ ತೆರಳಿ ಆರೋಗ್ಯ ತಪಾಷಣೆ ಮಾಡಿಕೊಳ್ಳುವುದು ಮತ್ತು ಸರಕಾರದಿಂದ ಸಿಗುವ ಪೌಷ್ಟಿಕಾಂಶ ಭರಿತ ಆಹಾರದ ಸದುಪಯೋಗ ಪಡಿಸಿಕೊಳ್ಳುವುದರ ಬಗ್ಗೆ ತಿಳಿಸಿದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ನ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದ ಸೂರ್ಯಕಾಂತಿ ಅವರು ಮಹಿಳಾ ಹಕ್ಕುಗಳು ಮತ್ತು ಮಹಿಳೆಯರು ಜಾಗ್ರತಿಗೊಳ್ಳುವುದು ಮತ್ತು ರಾಜ್ಯ ಸರಕಾರ ಕೊಟ್ಟಿರುವ ಮಹಿಳಾ ಪರವಾದ ಯೋಜನೆಯನ್ನು ಬಳಸಿಕೊಂಡು ಕುಟುಂಬ ನಿರ್ವಹಣೆ ಮತ್ತು ಸ್ವ ಉದ್ಯೋಗ ಮಾಡಿ ಎಲ್ಲರೂ ಸಮೃದ್ಧ ಜೀವನ ನಿಮ್ಮದಾಗಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿಕೊಂಡ ಕೆಪಿಸಿಸಿ ಸದಸ್ಯರಾದ ಪ್ರಕಾಶಚಂದ್ರ ಶೆಟ್ಟಿ ಅವರು ಸಿದ್ಧಾರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆ ಮೊದಲು ನುಡಿದಂತೆ 5 ಗ್ಯಾರೆಂಟಿ ಯೋಜನೆಯನ್ನು ಜಾರಿಗೊಳಿಸಿ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ, ಧಾರ್ಮಿಕವಾಗಿ ಜೀವನ ಮಟ್ಟ ನಿರ್ವಹಣೆಯನ್ನು ಉತ್ತಮ ಗೊಳಿಸಿದೆ, ಹಾಗಾಗಿ ನಮ್ಮ ಜೀವನ ಮಟ್ಟ ಉತ್ತಮಗೊಳ್ಳಲು ನೆರವಾದವರ ಕೊಡುಗೆ ಮರೆಯದೆ ಋಣ ತೀರಿಸುವ ಕೆಲಸ ನಾವು ಮಾಡಬೇಕು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪೂಜಾರಿ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಶಾಂತಿ ಪಿರೇರಾ, ಜಿಲ್ಲಾ RGPRS ಅಧ್ಯಕ್ಷರಾದ ಆನಂದ ಪೂಜಾರಿ, ಕೊಡೇರಿ, ಕಿರಿಮಂಜೇಶ್ವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ದೇವಾಡಿಗ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಜಗದೀಶ್ ದೇವಾಡಿಗ, ಮಂಜುನಾಥ್ ಪೂಜಾರಿ, ಮುಖಂಡರಾದ ರಾಜೇಶ್ ದೇವಾಡಿಗ, ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಮತ್ತು ಗೃಹಲಕ್ಷ್ಮೀ ಯೋಜನೆಯ ಫಲನುಭವಿ ಮಹಿಳೆಯರು ಉಪಸ್ಥಿತರಿದ್ದರು.