Kundapra.com ಕುಂದಾಪ್ರ ಡಾಟ್ ಕಾಂ

ಜಲಜೀವನ್ ಮಿಷನ್ ಸಮರ್ಪಕ ಅನುಷ್ಠಾನಕ್ಕೆ ಬದ್ಧ, ಲೋಪವಾದರೆ ಅಧಿಕಾರಿಗಳ ಮೇಲೆ ಕಾನೂನು ಕ್ರಮ: ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಜಲಜೀವನ್ ಮಿಷನ್ ಪ್ರಧಾನಿಯವರ ಮಹತ್ಮಾಕಾಂಕ್ಷೆಯ ಯೋಜನೆಯಾಗಿದೆ. ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು ಎಂಬುದು ಅವರ ಕನಸು. ಸಂಸದರ ಪ್ರಯತ್ನದ ಫಲವಾಗಿ ಯೋಜನೆ ಬೈಂದೂರು ಕ್ಷೇತ್ರಕ್ಕೆ ದೊರಕಿದ್ದು ಅದರ ಸಮರ್ಪಕ ಅನುಷ್ಠಾನ ಆಗಬೇಕಿದ್ದು, ಯಾವುದೇ ಲೋಪ ಕಂಡುಬಂದರೂ ಅಧಿಕಾರಿಗಳು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಎಚ್ಚರಿಸಿದ್ದಾರೆ.

ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದ ಸಂದರ್ಭ ವಿವಿಧ ತೊಡಕು ಎದುರಾಗಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಪದೇ ಪದೇ ಎಚ್ಚರಿಸಲಾಗಿದೆ. ಆದಾಗ್ಯೂ ಅರ್ಧಂಬರ್ಧ ಯೋಜನೆಯನ್ನು ಕೈಗೊಂಡು ಗ್ರಾಮ ಪಂಚಾಯತಿಯಿಂದ ನಿರಪೇಕ್ಷಣಾ ಪತ್ರ ಪಡೆದರೆ ಅದಕ್ಕೆ ಆಯಾ ಪಿಡಿಓಗಳೇ ಹೊಣೆಯಾಗುತ್ತಾರೆ. ಅವರ ಮೇಲೆ ನಿರ್ಣಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ.

ಮನೆ ಮನೆಗೆ ಕುಡಿಯುವ ನೀರು ಯೋಜನೆ ಎರಡು ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಜನಜೀವನ್ ಮಿಷನ್ ಮೂಲಕ ನಳ್ಳಿ ಹಾಗೂ ಪೈಪ್ ಲೈನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರಿನ ಮೂಲಕ ಜೋಡಣೆ ಆಗುತ್ತದೆ. ಆದರೆ ಎರಡನೇ ಹಂತದ ಕಾಮಗಾರಿಗೆ ವಿಳಂಬವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಆದಾಗ್ಯೂ ಕಾಮಗಾರಿ ಸಮರ್ಪಕತೆಯನ್ನು ಪರೀಕ್ಷಿಸಲು ಸ್ಥಳೀಯ ನೀರಿನ ಮೂಲಗಳಿಂದ ಪೈಪ್ಲೈನಿಗೆ ನೀರು ಹಾಯಿಸಲು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಸಲಹೆ ನೀಡಿದ್ದು ಅದರಂತೆ ಪರೀಕ್ಷಿಸಲಾಗಿದೆ. ಲೋಪವಿರುವ ಕಡೆ ನಿರಪೇಕ್ಷಣಾ ಪತ್ರ ಪಡೆಯುವಂತಿಲ್ಲ ಎಂದು ತಿಳಿಸಲಾಗಿದೆ ಎಂದರು.

ಕಳೆದ ಹಲವು ದಿನಗಳಿಂದ ಬೈಂದೂರು ಶಾಸಕನಾದ ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ಒತ್ತಡ ಇದರು ಸಹ ನಾನು ಈ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ ಎಲ್ಲವೂ ದೇವರ ಪಾದಕ್ಕೆ ಸಮರ್ಪಣೆ ಮಾಡಿ ಬಿಡುತ್ತೇನೆ ಎಂದರು.

ಮಾ.14 ರಂದು ಕುಂದಾಪುರದಲ್ಲಿ ಆದಿದ್ವಾರ ಜಾಬ್ ಹಬ್ಬ:
 ಸಮೃದ್ಧ ಬೈಂದೂರು ಈಗಾಗಲೇ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ದಾನಿಗಳ ನೆರವಿನಿಂದ ಮಾಡಿದೆ ಮತ್ತು ಬಹಳಷ್ಟು ಕೊಡುಗೆ ನೀಡಿದೆ ಅಸಿಸ್ಟಾಟೆಕ್ ಫೌಂಡೇಶನ್ ನೇತೃತ್ವದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ ಮಾ 14 ರಂದು ಎಮ್ ಐ.ಟಿ ಕುಂದಾಪುರದಲ್ಲಿ ಆದಿದ್ವಾರ ಜಾಬ್ ಹಬ್ಬ ಮತ್ತು ಮೊಣಕೈ ಕಳೆದುಕೊಂಡ ದಿವ್ಯಾಂಗರಿಗೆ ಉಚಿತ ಕೃತಕ ರೋಬೋಟಿಕ್‌ ಕೈ ಜೋಡಣೆ ಇದರ ಮಾಪನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್ ಕೆ., ಕಾರ್ಯದರ್ಶಿಗಳಾದ ಗೋಪಾಲ ಪೂಜಾರಿ ವಸ್ರೆ, ಕರಣ್ ಪೂಜಾರಿ, ಸಮ್ಮದ ಬೈಂದೂರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ, ಗಣೇಶ ಉಪ್ಪುಂದ ಉಪಸ್ಥಿತರಿದ್ದರು.

Exit mobile version