Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಚಿನ್ಮಯಿ ಆಸ್ಮತ್ರೆ: ಲೇಸರ್, ಡೆರ್ಮಾಟೋಸರ್ಜರಿ, ಕಾಸ್ಮೆಟಾಲಜಿ ವಿಭಾಗ ಉದ್ಘಾಟನೆ

ಕುಂದಾಪುರ: ಇಂದು ಹಣವಂತರು ಮಾತ್ರ ಸೌಂದರ್ಯವರ್ದಕ ಚಿಕಿತ್ಸೆಗೆ ಒಳಪಟ್ಟು ಸೌಂದರ್ಯವಂತಾಗಬಹುದು ಎಂಬ ಕಾಲ ಬದಲಾಗಿ ಎಲ್ಲರ ಕೈಗೆಟಕುವಂತೆ ಚಿಕಿತ್ಸೆ ಪಡೆಯುವ ಮಟ್ಟಿಗೆ ವೈದ್ಯ ವಿಜ್ಞಾನದಲ್ಲಿ ಆವಿಷ್ಕಾರಗಳಾಗಿವೆ. ನಗರ ಪ್ರದೇಶಗಳಿಗಷ್ಟೇ ಸೀಮಿತವಾದ ಚಿಕಿತ್ಸೆಗಳು ಇಂದು ಗ್ರಾಮೀಣ ಭಾಗಕ್ಕೂ ವ್ಯಾಪಿಸಿ ಜನರಿಗೆ ನೆರವಾಗುತ್ತಿದೆ ಎಂದು ಬೆಂಗಳೂರು ಕ್ಯೂಟಿಸ್ ಅಕಾಡೆಮಿ ಆಫ್ ಕ್ಯೂಟಿಸೀಯಸ್ ಸೈನ್ಸ್‌ನ ಎಂ.ಡಿ ಡಾ. ಚಂದ್ರಶೇಖರ ಬಿ.ಎಸ್ ಹೇಳಿದರು.

ಅವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಕುಂದಾಪುರ ಪರಿಸರದಲ್ಲೇ ಪ್ರಥಮ ಭಾರಿಗೆ ಆರಂಭಗೊಂಡ ಲೇಸರ್, ಡೆರ್ಮಾಟೋಸರ್ಜರಿ ಹಾಗೂ ಕಾಸ್ಮೆಟಾಲಜಿ ವಿಭಾಗಗಳನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಉತ್ತಮ ವೈದ್ಯ ತನ್ನ ಕಾರ್ಯಕ್ಷಮತೆಯ ಬಗ್ಗೆ ಪ್ರಚಾರ ಮಾಡಬೇಕೆಂದಿಲ್ಲ. ವೈದ್ಯನಲ್ಲಿನ ವಿಶೇಷತೆಯನ್ನು ಆತನಲ್ಲಿಗೆ ಬರುವ ರೋಗಿಗಳೇ ಗುರುತಿಸಿ ಆತನ ಏಳಿಗೆಗೂ ಸಹಕಾರಿಯಾಗುತ್ತಾರೆ. ಒಂದು ಕಾಲದಲ್ಲಿ ಕೇಳುವವರೇ ಇಲ್ಲವಾಗಿದ್ದ ಡೆರ್ಮಾಟೋಸರ್ಜರಿ ವಿಭಾಗಕ್ಕೆ ಇಂದು ಎಲ್ಲಿಲ್ಲದ ಬೇಡಿಕೆ ಇದೆ. ಅವಕಾಶಗಳು ಬಂದಾಗ ಅದಕ್ಕೆ ತೆರೆದುಕೊಳ್ಳುವುದು ಮತ್ತು ಅದು ಸಾಮಾಜಿಕ ಕಳಕಳಿಯನ್ನೂ ಒಳಗೊಳ್ಳುವಂತೆ ನೋಡಿಕೊಳ್ಳುವುದು ಬಹುಮುಖ್ಯ ಎಂದರು.

ಕೋಟ ಗೀತಾಂಜಲಿ ಟ್ರಸ್ಟ್ ನ ಪ್ರವರ್ತಕ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿ ಸುರೇಶ್ ಆರ್. ಕಾಂಚನ್ ಹಾಗೂ ಗೋಪಾಲ್ ಎಸ್. ಪುತ್ರನ್ ಉಪಸ್ಥಿತರಿದ್ದರು.  ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಕಟ್ಟೆ ಗೋಪಾಲಕೃಷ್ಣ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಂದ್ರ ಕಟ್ಟೆ ಸ್ವಾಗತಿಸಿದರು. ಸುಮಾ ಪುತ್ರನ್ ಧನ್ಯವಾದಗೈದರು. ಕೆ.ಸಿ ರಾಜೇಶ್ ನಿರೂಪಿಸಿದರು.

* ನಾವು ಬೆಳೆಯುವುದರೊಂದಿಗೆ ಇತರಿಗೂ ಉಪಯೋಗವಾಗುವಂತಹ ಸೇವೆಯನ್ನು ನೀಡಬೇಕೆಂಬ ಕನಸನ್ನು ಚಿನ್ಮಯಿ ಆಸ್ಪತ್ರೆಯ ಪ್ರವರ್ತಕರು ಆರಂಭದಿಂದಲೂ ಹೊಂದಿದ್ದರು. ಅದಕ್ಕೆ ಅನುಗುಣವಾಗಿ ಜನರಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಆಗಿಂದಾಗ್ಗೆ ನೀಡುವ ಮೂಲಕ ಕುಂದಾಪುರ ಪರಿಸರದಲ್ಲಿ ಮನೆಮಾತಾಗಿದೆ. – ಆನಂದ ಸಿ. ಕುಂದರ್, ಮತ್ಸೋದ್ಯದ್ಯಮಿ

Exit mobile version