Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ ಸ.ಪ್ರ.ದ. ಕಾಲೇಜಿನಲ್ಲಿ ವ್ಯವಹಾರ ಕ್ಷೇತ್ರದ ಹೊಸ ಮಾದರಿಗಳು ಎಂಬ ವಿಷಯದಲ್ಲಿ ಕಾರ್ಯಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ  ವ್ಯವಹಾರ ಕ್ಷೇತ್ರದ ಹೊಸ ಮಾದರಿಗಳು ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.

ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಲೋಕೇಶ್  ಪ್ರಸ್ತುತ ವ್ಯವಹಾರ ಕ್ಷೇತ್ರದ ವಿವಿಧ ಮಾದರಿಗಳನ್ನು ವಿವರಿಸಿ ಮಾತನಾಡಿ, ವ್ಯವಹಾರ ರಂಗದಲ್ಲಿ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿರುತ್ತದೆ ಯಾವುದೇ ಹೊಸ ವ್ಯವಹಾರ ಮಾದರಿಯ ಅನ್ವೇಷಣೆ ಹಾಗೂ ಚಾಲ್ತಿಯಲ್ಲಿರುವ ಮಾದರಿಗಳಲ್ಲಿನ ಬದಲಾವಣೆಗಳು ಹಲವಾರು ಸವಾಲುಗಳನ್ನು ಸೃಷ್ಟಿಸುತ್ತದೆ ಹಾಗೂ ಹೊಸ ಅವಕಾಶಗಳನ್ನು ತೆರೆದುಕೊಡುತ್ತದೆ.

ಉದ್ಯಮ ರಂಗದ ಮಾದರಿಗಳಲ್ಲಾಗುವ  ವ್ಯತ್ಯಾಸವು ಉದ್ದಿಮೆದಾರರ, ಉದ್ಯೋಗಿಗಳ, ಗ್ರಾಹಕರ ಹಾಗೂ ಉದ್ಯೋಗ ಆಕಾಂಕ್ಷಿಗಳ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಕ್ರಿಯಾತ್ಮಕ ವ್ಯವಹಾರ ಕ್ಷೇತ್ರದ ಬದಲಾವಣೆಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಈ ನೂತನ ಮಾದರಿಗಳು ಹೇಗೆ ಹುಟ್ಟಿಕೊಳ್ಳುತ್ತವೆ ಹಾಗೂ ಈ ಮಾದರಿಗಳು ಹುಟ್ಟಿಕೊಂಡಾಗ  ಹಿತಾಸಕ್ತಿದಾರರ ಮೇಲೆ ಆಗುವ ಪ್ರಭಾವಗಳನ್ನು  ಸೂಕ್ಷ್ಮವಾಗಿ ಅವಲೋಕಿಸಿ  ಅದರಿಂದ ಒದಗಿ ಬರುವ ಅವಕಾಶಗಳನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ನಮ್ಮಲ್ಲಿರಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಮಾತನಾಡಿ, ವ್ಯವಹಾರ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳು ಬಹಳ ಶೀಘ್ರವಾಗಿ ನಡೆಯುತ್ತಿರುತ್ತದೆ. ನಗದು ವ್ಯವಹಾರದಿಂದ ಡಿಜಿಟಲ್ ವ್ಯವಹಾರಗಳಿಗೆ ಬದಲಾದಾಗ ಬ್ಯಾಂಕ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಆಗಿರುವ ಗೊಂದಲ, ಸವಾಲುಗಳು  ಹಾಗೂ ಅನುಕೂಲತೆಗಳನ್ನು ನಾವೆಲ್ಲ ಗಮನಿಸಿದ್ದೇವೆ. ಹಿಂದಿನ  ದಿನಗಳಲ್ಲಿದ್ದ  ಕೊಂಡುಕೊಳ್ಳುವಿಕೆಯ ಮಾದರಿ ಬದಲಾಗಿ ಇಂದು ಆನ್ಲೈನ್ ವ್ಯವಹಾರವೇ ಜನರಿಗೆ ಹತ್ತಿರವಾಗುತ್ತಿದೆ. ವ್ಯವಹಾರದ ಎಲ್ಲಾ ರಂಗಗಳಲ್ಲೂ ಗಣಕಯಂತ್ರಗಳು, ಡಿಜಿಟಲ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಅಧಿಕವಾಗಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲಾ ಬದಲಾವಣೆಗಳ ಪರಿಣಾಮವನ್ನು ನಾವೆಲ್ಲರೂ ತಿಳಿದುಕೊಂಡು ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಬೇಕಾಗಿದೆ ಎಂದರು. 

ಡಾ. ಲೋಕೇಶ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.  ಕಾಲೇಜಿನ ಸ್ನಾತಕೋತ್ತರ  ವಿಭಾಗದ ಸಂಚಾಲಕ ಡಾ. ಉದಯ ಶೆಟ್ಟಿ. ಕೆ.  ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕ ನಾಗರಾಜ ಯು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ, ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶೇಖರ ಬಿ, ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪೈ  ಹಾಗೂ ಉಪನ್ಯಾಸಕರಾದ ಉಜ್ವಲ ಶೆಟ್ಟಿ, ಸಾವಿತ್ರಿ, ಶಾಂತಿ  ಉಪಸ್ಥಿತರಿದ್ದರು. ಅಮೃತ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಪೂಜಾ ಸ್ವಾಗತಿಸಿ, ಪ್ರತಿಮಾ ವಂದಿಸಿದರು.

Exit mobile version