ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ (62ವರ್ಷ) ಅವರು ಅಸೌಖ್ಯದಿಂದ ಮಂಗಳವಾರ (ಎ.07) ನಿಧನರಾದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದ್ದ ಗಣೇಶ್ ಅವರು ದಿಢೀರ್ ಕುಸಿದು ಬಿದ್ದಿದ್ದರು. ನಂತರ ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಮೆದುಳು ರಕ್ತಸ್ರಾವದಿಂದ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದರು.
ಗಣೇಶ್ ಗಂಗೊಳ್ಳಿ ಅವರು ಕಳೆದ 32 ವರ್ಷಗಳಿಂದ ಜಾನಪದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆಕಾಶವಾಣಿ ಕಲಾವಿದರಾಗಿ, ಸುಗಮ ಸಂಗೀತ ಗಾಯಕರಾಗಿ ಗುರುತಿಸಿಕೊಂಡಿದ್ದ ಇವರಿಗೆ ಡಾಕ್ಟರೇಟ್, ಖಿದ್ಮಾ ಸೇವಾರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿಯಾಗಿರುವ ಗಣೇಶ್ ಅವರು ಕಷ್ಟಪಟ್ಟು ಗಾಯಕನಾಗಿ, ಜನಪ್ರಿಯತೆ ಗಳಿಸಿದ್ದರು. ಆಕಾಶವಾಣಿ ಸೇರಿದಂತೆ ಕಳೆದ ಮೂರು ದಶಕಗಳಲ್ಲಿ ನೂರಾರು ವೇದಿಕೆ, ಸಂಘ-ಸಂಸ್ಥೆಗಳಲ್ಲಿ ತಮ್ಮ ಸುಗಮ ಸಂಗೀತದ ಸುಧೆಯನ್ನು ಹರಿಸಿದ್ದರು. ಗಣೇಶ್ ಗಂಗೊಳ್ಳಿ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

