ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಘಟಕದ ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಸಂತ್ ಅವರು ಪ್ರತಿಷ್ಠಿತ ‘ಲೆಫ್ಟಿನೆಂಟ್’ (Lieutenant) ಪದವಿಗೆ ಭಾಜನರಾಗುವ ಮೂಲಕ ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಒಟ್ಟು ಮೂರು ತಿಂಗಳ ಕಾಲ ನಡೆದ ‘ಪ್ರಿ-ಕಮಿಷನ್’ (PRCN – Pre-Commission) ಕಠಿಣ ಸೇನಾ ತರಬೇತಿಯಲ್ಲಿ ಅವರು ಪಾಲ್ಗೊಂಡಿದ್ದರು. ಸೇನಾ ಪಡೆಯ ಅತ್ಯುನ್ನತ ಶಿಸ್ತು, ನಾಯಕತ್ವಗುಣಗಳು, ಶಸ್ತ್ರಾಸ್ತ್ರ ಬಳಕೆ ಹಾಗೂ ದೈಹಿಕ-ಮಾನಸಿಕ ಸಾಮರ್ಥ್ಯವನ್ನು ರೂಪಿಸುವ ಈ ತರಬೇತಿಯನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಲೆಫ್ಟಿನೆಂಟ್ ಶ್ರೇಣಿಯನ್ನು ಪ್ರದಾನ ಮಾಡಲಾಗಿದೆ.
ಈ ತರಬೇತಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ, ಡಾ. ವಸಂತ್ ಅವರು ಇದೀಗ ‘ಅಸೋಸಿಯೇಟ್ ಎನ್ಸಿಸಿ ಅಧಿಕಾರಿ’ಯಾಗಿ (Associate NCC Officer -ANO) ಭಡ್ತಿ ಪಡೆದಿದ್ದಾರೆ.
ಒಬ್ಬ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಜವಾಬ್ದಾರಿಯ ಜೊತೆಗೆ ಸೇನಾ ತರಬೇತಿಯ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತಿರುವ ಇವರ ಸಾಧನೆ ಅಭಿನಂದನಾರ್ಹ. ಇವರ ಈ ಹೊಸ ಹುದ್ದೆ ಹಾಗೂ ಅನುಭವವು, ಕಾಲೇಜಿನ ಎನ್ಸಿಸಿ ಕೆಡೆಟ್ಗಳಿಗೆ ಸೇನಾ ಸೇವೆಗೆ ಸೇರಲು ಮತ್ತಷ್ಟು ಸ್ಫೂರ್ತಿ ನೀಡಲಿದ್ದು, ಯುವಜನತೆಯಲ್ಲಿ ಶಿಸ್ತು, ನಾಯಕತ್ವ ಮತ್ತು ದೇಶಭಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

