Site icon Kundapra.com ಕುಂದಾಪ್ರ ಡಾಟ್ ಕಾಂ

ಎ.12-18ರ ವರೆಗೆ ಬಿಜೂರು ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಗಳ ಪುನರ್‌ ಪ್ರತಿಷ್ಠೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಸರಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಎರಡನೇ ಮಾರಣಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ಕಾರಣಿಕ ಸ್ಥಳ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಮೂರ್ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಗಳ ದೈವಸ್ಥಾನ.

ಈ ಸನ್ನಿಧಿಯಲ್ಲಿ ಜಾತಿ, ಮತ ಭೇದವಿಲ್ಲದೇ ಭಕ್ತರೇ ಸ್ವತಃ ತಾವೇ ಮುಟ್ಟಿ ಪೂಜೆಯನ್ನು ಮಾಡುವ ಪದ್ಧತಿ ಇರುವುದು ಇನ್ನೊಂದು ವಿಶೇಷವಾಗಿದೆ. ನಿತ್ಯ ಜೀವನದ ಕಷ್ಟಗಳಿಗೆ ಮುಕ್ತಿ ದೊರಕಿಸಿ, ಬಾಳ ದಾರಿಗೆ ಶಕ್ತಿ ನೀಡಿ ಬೆಳಕು ತೋರುತ್ತಿರುವ ವಿಶೇಷ ಸ್ಥಳವಾಗಿ ಗುರುತಿಸಿಕೊಂಡಿದೆ.

ಇಲ್ಲಿ ಎ.12ರಿಂದ18ರ ವರೆಗೆ ಶ್ರೀ ನಂದಿಕೇಶ್ವರ ಪರಿವಾರ ದೈವಗಳ ಮತ್ತು ನಾಗ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಸುವರ್ಣಮಹೋತ್ಸವ ಹಾಗೂ ಶ್ರೀ ರಾಮ ನಾಮ ಕೋಟಿ ಜಪ ಯಜ್ಞ ಹಾಗೂ ಪೂರ್ಣಾಹುತಿ ಕಾರ್ಯಕ್ರಮಗಳು ನಡೆಯಲಿದೆ.

ಎ.12ರಂದು ಸಂಜೆ ಗಂಟೆ 6ರಿಂದ ರಾಕ್ಷೋಘ್ನ ಹೋಮ, 1008 ಅಷ್ಟೋತ್ತರ ಸಹಸ್ರ ಬ್ರಹ್ಮಕಲಶ, ಕಲಶ ಸ್ಥಾಪನಾ ಪೂಜೆ ನಡೆಯಲಿದೆ.

ಎ.13ರಂದು ಬೆಳಗ್ಗೆ ಗಂಟೆ 11.30ಕ್ಕೆ ಶ್ರೀ ನಾಗ ದೇವರ ಶಿಲಾ ಬಿಂಬ ಪುನಃ ಪ್ರತಿಷ್ಠೆ, ಅಧಿವಾಸ ಹೋಮ, ತತ್ವ ಹೋಮ, ಕಲಾವೃದ್ಧಿ ಹೋಮ, ಸರ್ಪ ಗಾಯತ್ರಿ ಹೋಮ, ಸರ್ವ ಪ್ರಾಯಶ್ಚಿತ ತಿಲ ಹೋಮ ನಡೆಯಲಿದೆ. ಸಂಜೆ ಗಂಟೆ 6ರಿಂದ ಸಪರಿವಾರ ದೈವಗಳ ಪ್ರತಿಷ್ಠಾ ಹೋಮ, ರಾತ್ರಿ ಗಂಟೆ 7.30ಕ್ಕೆ ಸಪರಿವಾರ ದೈವಗಳ ಪ್ರತಿಷ್ಠೆ, ಅಧಿವಾಸ ಹೋಮ, ಕಲಾವೃದ್ಧಿ ಹೋಮ ನಡೆಯಲಿದೆ.

ಎ.14ರಂದು ಬೆಳಗ್ಗೆ ಕಲಾವೃದ್ಧಿ ಹೋಮಗಳು, ಪೂರ್ಣಾಹುತಿ, ಎಲ್ಲಾ ದೇವರಿಗೂ ಪಂಚಾಮೃತ ಪೂರ್ವಕ ಅಷ್ಟೋತ್ತರ ಸಹಸ್ರ ಕಲಶಾಭಿಷೇಕ ಮತ್ತು ಕಲಾಶಾಭಿಶೇಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಆಶ್ಲೇಷಾಬಲಿ, ಎಲ್ಲಾ ದೇವರಿಗೂ ಕೋಷ್ಮಾಂಡಬಲಿ ಸಮರ್ಪಣೆ ನಡೆಯಲಿದೆ.

ಎ.15ರಂದು ಬೆಳಿಗ್ಗೆ ಗಂಟೆ 8.05ಕ್ಕೆ ಭಜನಾ ಸುವರ್ಣ ಮಹೋತ್ಸವದ ಪ್ರದೀಪ ಸ್ಥಾಪನೆಯೊಂದಿಗೆ ಅಖಂಡ ಭಜನೆ ಪ್ರಾರಂಭಗೊಳ್ಳಲಿದೆ.

ಎ.18ರಂದು ಬೆಳಿಗ್ಗೆ ಗಂಟೆ 8.30ರಿಂದ ಪ್ರದೀಪ ವಿಸರ್ಜನೆಯೊಂದಿಗೆ ಭಜನಾ ಮಂಗಲೋತ್ಸವ ಜರುಗಲಿರುವುದು. ಬೆಳಿಗ್ಗೆ ಗಂಟೆ 9.30 ರಿಂದ 50ನೇ ವರ್ಷದ ಭಜನಾ ಸುವರ್ಣಮಹೋತ್ಸವದ ಅಂಗವಾಗಿ ಶ್ರೀ ರಾಮ ನಾಮ ಕೋಟಿ ಜಪ ಯಜ್ಞ ಪ್ರಾರಂಭಗೊಂಡು ಪುರ್ಣಾಹುತಿ ನಡೆಯಲಿದೆ.  ಮಧ್ಯಾಹ್ನ ಗಂಟೆ 3.30ಕ್ಕೆ ಹಿರಿಯ ಭಜನಾಕಾರರನ್ನು ಮತ್ತು ಹಿರಿಯ ಸ್ವಯಂಸೇವಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 5ರಿಂದ ಗೆಂಡಸೇವೆ ನಡೆಯಲಿದ್ದು, ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 8 ರಿಂದ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡ್ಕ ಇವರಿಂದ ಶ್ರೀ ಸ್ವಾಮಿ ವೀರಭದ್ರ ಯಕ್ಷಗಾನ ನಡೆಯಲಿದೆ.

ಕಾರ್ಯಕ್ರಮದ ಆರು ದಿನಗಳ ಕಾರ್ಯಕ್ರಮದಲ್ಲಿ ನಿತ್ಯವೂ ಅನ್ನಸಂತರ್ಪಣೆ ನಡೆಯಲಿದೆ.

ವಿಶೇಷ ಮನವಿ:
ಶ್ರೀ ನಂದಿಕೇಶ್ವರ ಸನ್ನಿಧಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹಾಗೂ ಶ್ರೀ ರಾಮ ದೇವರಿಗೆ ಶಿಲಾಮಯ ಮಂಟಪ, ದೈವಸ್ಥಾನದ ಸುತ್ತಾ ಇಂಟರ್ ಲಾಕ್ ಅಳವಡಿಕೆ ಕೆಲಸ ಮತ್ತು ರಾಹು, ಬ್ಬರ್ಯ, ಪಂಜುರ್ಲಿ, ನಾಗ ದೇವರಿಗೆ ಪುನರ್ ಪ್ರತಿಷ್ಠೆ ಕಾರ್ಯಗಳು ನಡೆಯುತ್ತಿದ್ದು ನಂಬಿದ ಕುಟುಂಬಸ್ಥರು, ಊರ ಪರಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಗಳ ಹಾಗೂ ಶ್ರೀರಾಮ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿಯವರು ವಿನಂತಿಸಿಕೊಳ್ಳುತ್ತೇವೆ.

Exit mobile version