ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಳೆದ ಹನ್ನೊಂದು ವರ್ಷಗಳಿಂದ ಮಂಗಳೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಚಟುವಟಿಕೆಯಲ್ಲಿರುವ ಅರೆಹೊಳೆ ಪ್ರತಿಷ್ಠಾನ, ಪ್ರಸ್ತುತ ಬೈಂದೂರು ತಾಲೂಕಿನ ಅರೆಹೊಳೆಯಲ್ಲಿ, ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್ ಎನ್ನುವ ಹೆಸರಲ್ಲಿ ರಂಗತಂಡ ಹಾಗೂ ರಂಗಶಾಲೆಯನ್ನು ಆರಂಭಿಸಿದೆ. ಅರೆಹೊಳೆಯಂತಹ ಗ್ರಾಮೀಣ ಪ್ರದೇಶದಲ್ಲಿ ರಂಗಚಟುವಟಿಕೆ, ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇದೇ ಎ.16 ರಿಂದ 20ರ ತನಕ ಅರೆಹೊಳೆ ದಿಬ್ಬಣ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಮ್ಮ ಬಹು ಮಹತ್ವಕಾಂಕ್ಷೆಯ ಅರೆಹೊಳೆ ರಂಗಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಆಡುಂಬೊಲ ನಡೆಯಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಮುಖ್ಯಸ್ಥ ಅರೆಹೊಳೆ ಸದಾಶಿವ ರಾವ್ ತಿಳಿಸಿದರು.

ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್ನಲ್ಲಿ ಎ.16 ಗುರುವಾರ ಬೆಳಿಗ್ಗೆ 8 ಗಂಟೆಗೆ ಎ.ಎಸ್.ಕೆ ಫೌಂಡೇಶನ್ ಪ್ರಾಯೋಜಿತ ಐದು ದಿನಗಳ ರಂಗ ಶಿಬಿರ ರಂಗಿನಾಟವನ್ನು ಯಕ್ಷಗುರು ಸುಜಯೀಂದ್ರ ಹಂದೆ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮಹಾಗಣಪತಿ ವಾದ್ಯವೃಂದ ಆಕಳಬೈಲು ಇವರ ಪ್ರಸ್ತುತಿಯಲ್ಲಿ ಸ್ಯಾಕ್ಸೋಪೋನ್ ವಾದ್ಯಗೋಷ್ಠಿ ನಡೆಯಲಿದೆ. ಸಂಜೆ 5.30ಕ್ಕೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಧರ್ಮಸ್ಥಳದ ಮಹಿಮೆಯನ್ನು ಸಾರುವ ಧರ್ಮ ಸಂಸ್ಥಾಪನಾರ್ಥಾಯ ಎನ್ನುವ ನೃತ್ಯರೂಪಕದ ಪ್ರಥಮ ಪ್ರದರ್ಶನ ನಡೆಯಲಿದೆ. ರಾತ್ರಿ 8ಕ್ಕೆ ಹನುಮಗಿರಿ ಮೇಳದವರಿಂದ ಯಕ್ಷಗಾನ ಸಾಕೇತ ಸಾಮ್ರಾಜ್ಞಿ ಪ್ರದರ್ಶನಗೊಳ್ಳಲಿದೆ ಎಂದು ಅವರು ಬುಧವಾರ ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್ನಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾಹಿತಿ ನೀಡಿದರು.
ಎ.17ರಂದು ಮಧ್ಯಾಹ್ನ 2.30ಕ್ಕೆ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಪ್ರಸ್ತುತಿಯಲ್ಲಿ ತಾಳಮದ್ದಳೆ ನಡೆಯಲಿದೆ. ಸಂಜೆ 7.30ಕ್ಕೆ ನಟನ ಪ್ರಸ್ತುತಿಯಲ್ಲಿ ನಾಟಕ ಕಣಿವೆಯ ಹಾಡು ಪ್ರದರ್ಶನಗೊಳ್ಳಲಿದೆ. ಎ.18ರಂದು ಮಧ್ಯಾಹ್ನ 2.30ಕ್ಕೆ ಅರೆಹೊಳೆ ನೃತ್ಯ ತರಗತಿಯ ವಿದ್ಯಾರ್ಥಿಗಳಿಂದ ನೃತ್ಯ ವರ್ಷಾ, ಗೀತಾ ಬೈಂದೂರು ನೇತೃತ್ವದಲ್ಲಿ ಹಾಡುತಾ ಆಡುತಾ, ಸಂಜೆ 5ಕ್ಕೆ ಹಿರಿಯ ಸ್ಯಾಕ್ಸೋಪೋನ್ ವಾದಕ ಮಂಜು ದೇವಾಡಿಗ ಅಕಳಬೈಲು, ಹಿರಿಯ ಯಕ್ಷಗಾನ ಕಲಾವಿದ ಮಹಾಬಲೇಶ್ವರ ರೈ ಕಾಸರಗೋಡು, ಹಿರಿಯ ಸೂಲಗಿತ್ತಿ ತುಂಗ ದೇವಾಡಿಗ ಚಿಕ್ತಾಡಿ ಇವರಿಗೆ ಅರೆಹೊಳೆ ದಿಬ್ಬಣ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಂಜೆ 7.15ರಿಂದ ಅಯಣ ಡಾನ್ಸ್ ತಂಡದವರಿಂದ ಧ್ರುವ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದರು.
ಎ.19 ಮಧ್ಯಾಹ್ನ 2.30ಕ್ಕೆ ಅರೆ ಶಾಸ್ತಿçÃಯ ಸಮೂಹ ನೃತ್ಯ ಸ್ಪರ್ಧೆ ನೂಪುರಂಗಳ್, ಸಂಜೆ 6.45ಕ್ಕೆ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನನೃತ್ಯ ಅಕಾಡೆಮಿ ಮಂಗಳೂರು ಇವರ ಪ್ರಸ್ತುತಿಯಲ್ಲಿ ಜ್ವಾಲಾಮುಖಿ ಅಂಬೆ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ. ಎ.20ರಂದು ಮಧ್ಯಾಹ್ನ 2.30ರಿಂದ ರಾಜ್ ಗುರು ಹೊಸಕೋಟೆ ಮತ್ತು ನಯನ ಸೂಡ ಇವರಿಂದ ಅದಿಮೂಲ ತಂಡ ಹಾಗೂ ರಂಗಿನಾಟ ಶಿಬಿರಾರ್ಥಿಗಳಿಂದ ರಂಗಗೀತೆಗಳು, ಸಂಜೆ 7.30ಕ್ಕೆ ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯ ರೂಪಕ ನಾರಸಿಂಹ ಪ್ರದರ್ಶನಗೊಳ್ಳಲಿದೆ ಎಂದರು.
ಅರೆಹೊಳೆ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಕಾರಂತ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಚಿಕ್ತಾಡಿ ಗೆಳೆಯರ ಬಳಗದ ಅಧ್ಯಕ್ಷ ಉಮೇಶ ಮೊಗವೀರ, ನಂದಗೋಕುಲ ತಂಡದ ನೃತ್ಯ ನಿರ್ದೇಶಕಿ ಶ್ವೇತಾ ಅರೆಹೊಳೆ ಉಪಸ್ಥಿತರಿದ್ದರು. ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ ಕಾರ್ಯಕ್ರಮ ನಿರ್ವಹಿಸಿದರು.