Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸೈಂಟ್ ಥಾಮಸ್ ಶಾಲೆಯಲ್ಲಿ ಶಿಕ್ಷಕರ ಕೌಶಲ್ಯ ವೃದ್ಧಿಗೆ ಸಿಬಿಎಸ್ಇ ತರಬೇತಿ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸೈಂಟ್ ಥಾಮಸ್ ಶಾಲೆಯು ಬೈಂದೂರಿನಲ್ಲಿ ಸೋಮವಾರ- ಮಂಗಳವಾರದಂದು ಸಿಬಿಎಸ್ಇ ವತಿಯಿಂದ  ಆಯೋಜಿಸಲಾದ “ಸಾಮರ್ಥ್ಯಭಿವೃದ್ಧಿ (ಕೌಶ ಲ್ಯಾಭಿವೃದ್ಧಿ) ಕಾರ್ಯಕ್ರಮ (CBP)” ಯಶಸ್ವಿಯಾಗಿ ನಡೆಯಿತು. “ಸಾಮರ್ಥ್ಯಾಧಾರಿತ ಕಲಿಕೆ ಮತ್ತು ಬಹು ಆಯ್ಕೆಯಪ್ರಶ್ನೆಗಳು”ವಿಷಯಾಧಾರಿತ ಈ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಉತ್ಸಾಹಭರಿತವಾಗಿ ಭಾಗವಹಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಫಿಲಿಪ್ ನೆಲ್ಲಿವಿಳಾ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲ್ಯಾಧಾರಿತ ಅಧ್ಯಯನದ ಮಹತ್ವವನ್ನು ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು. ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ವಿಶ್ಲೇಷಣಾತ್ಮಕ ಮನೋಭಾವ ಬೆಳೆಸುವಲ್ಲಿ ಸಾಮರ್ಥ್ಯಾಧಾರಿತ ಕಲಿಕೆ   ಅತ್ಯಂತ ಪರಿಣಾಮಕಾರಿ ಎಂದರು.

ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಧರ ಬಿ ಹಾಗೂ ಡಾ. ಮೋನಿಕಾ ಡಿಸೋಜ ಅವರು ಶಿಕ್ಷಕರಿಗೆ ಸಮಗ್ರ ಮಾಹಿತಿ ನೀಡಿದರು. ಸಾಮರ್ಥ್ಯಾಧಾರಿತ, (ಕೌಶಲ್ಯ) ಪ್ರಶ್ನೆಗಳನ್ನು ರೂಪಿಸುವ ವಿಧಾನ, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಅಳೆಯುವ ಹೊಸ ವಿಧಾನಗಳು, ಪ್ರಶ್ನೆಗಳು ಕೇವಲ ನೆನಪಿನ ಶಕ್ತಿಯನ್ನು ಪರೀಕ್ಷಿಸುವಂತಿರದೆ, ವಿದ್ಯಾರ್ಥಿಗಳ ಅರ್ಥೈಸುವಿಕೆ, ವಿಶ್ಲೇಷಣಾ ಸಾಮರ್ಥ್ಯ ಹಾಗೂ ತಾರ್ಕಿಕ ಚಿಂತನೆಗಳನ್ನು ಅಳೆಯುವ ರೀತಿಯಲ್ಲಿ ರೂಪಿಸಬೇಕೆಂದು ತಿಳಿಸಿದರು. ಅವರು ಬ್ಲೂಮ್ ಟ್ಯಾಕ್ಸಾನಮಿ ಆಧಾರಿತ ಪ್ರಶ್ನೆಪತ್ರಿಕೆ ರಚನೆಯ ಕುರಿತು ವಿವರವಾಗಿ ತಿಳಿಸಿ, ಉತ್ತಮ ಪ್ರಶ್ನೆಗಳ ಮಾದರಿಗಳನ್ನು ತಿಳಿಸಿ ಬಹು ಆಯ್ಕೆಯ ಪ್ರಶ್ನೆಗಳ(MCQ) ತಯಾರಿಕೆಯಲ್ಲಿ ಗಮನಿಸಬೇಕಾದ ಅಂಶಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಂದಿಕೊಂಡಿರುವ ಹೊಸ ಬೋಧನಾ ವಿಧಾನಗಳ ಕುರಿತು ಅವರು ವಿವರವಾಗಿ ತಿಳಿಸಿದರು.

ಶಿಕ್ಷಕರು ಕಾರ್ಯಾಗಾರದಲ್ಲಿ ಚರ್ಚೆ, ಗುಂಪು ಚಟುವಟಿಕೆ ಮತ್ತು ಪ್ರಾಯೋಗಿಕ ತರಬೇತಿಗಳ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡರು. ತರಗತಿಯಲ್ಲಿ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಹೇಗೆ ಪ್ರಶ್ನೆಗಳನ್ನು ರೂಪಿಸಬೇಕು ಎಂಬುದರ ಕುರಿತು ವಿಶೇಷ ಅಧಿವೇಶನ ನಡೆಯಿತು. ಭಾಗವಹಿಸಿದ ಶಿಕ್ಷಕರು ಕಾರ್ಯಾಗಾರವು ಅತ್ಯಂತ ಉಪಯುಕ್ತ ಮತ್ತು ಪ್ರೇರಣಾದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಓಕ್ ವುಡ್ ಇಂಡಿಯನ್ ಶಾಲೆ ಕುಂದಾಪುರ,ಶ್ರೀ ಮೂಕಾಂಬಿಕಾ ಶಾಲೆ ಕೊಲ್ಲೂರು ಹಾಗೂ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಶಾಲೆ ಜಡ್ಕಲ್ ಸೇರಿದಂತೆ ಸೈಂಟ್ ಥಾಮಸ್ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಸಿಸ್ಟರ್ ಕಾರ್ಮೆಲ್ ಅವರು ಸುಂದರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಯಶಸ್ಸಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು , ಶಿಕ್ಷಕ ವೃಂದ ಹಾಗೂ ಸಹಾಯಕರು ಯಶಸ್ವಿಗೊಳಿಸಿ . ಈ ಕಾರ್ಯಾಗಾರವು ಶಿಕ್ಷಕರ ವೃತ್ತಿಪರ ಕೌಶಲ್ಯ ವೃದ್ಧಿಗೆ ಹೊಸ ದಿಕ್ಕು ನೀಡಿದಂತಾಯಿತು.

Exit mobile version