ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಾರಾಹಿ ಯೋಜನೆ ವಿಳಂಬದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವ ಸಂಸದ ಬಿ. ವೈ. ರಾಘವೇಂದ್ರರವರ ಹೇಳಿಕೆ ಸತ್ಯಕ್ಕೆ ದೂರವಾದ ಮಾತು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.
1979 ರಂದು ಅಂದಿನ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ರವರು ವರಾಹಿ ಮೂಲ ಯೋಜನೆಗೆ ಶಂಖುಸ್ಥಾಪನೆ ಮಾಡಿದರು. ಇದು ಅಂದಿನ ಅಂದಾಜು ಮೊತ್ತ ಒಂಬತ್ತು ಕೋಟಿ ಅದರಲ್ಲಿ ಬಲ ದಂಡೆ, ಎಡ ದಂಡೆ ಮತ್ತು ಏತ ನೀರಾವರಿ ಕಾಲುವೆ ಮುಖಾಂತರ ಕುಂದಾಪುರ ತಾಲ್ಲೂಕು ಮತ್ತು ಅಂದಿನ ಉಡುಪಿ ತಾಲ್ಲೂಕಿನ ಬ್ರಹ್ಮಾವರದ ತನಕ ಸುಮಾರು ಹದಿನೆಂಟು ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಹಾಯಿಸುವ ಯೋಜನೆ. ಆದರೆ ಸಂಸದರು ಹೇಳುವಂತೆ ಈ ಯೋಜನೆ ವಿಳಂಬಕ್ಕೆ ಯಾವುದೇ ಖಾಸಗಿ ವಿದ್ಯುತ್ ಉತ್ಪಾದಕರಾಗಲಿ ಇಲ್ಲಾ ರಾಜಕೀಯ ಹಿತಾಸಕ್ತಿಗಳಾಗಲಿ ಕಾರಣವಲ್ಲಾ.
ಜನಪ್ರತಿನಿದಿನಗಳ ಇಚ್ಚಾಶಕ್ತಿಯ ಕೊರತೆ ವರಾಹಿ ಮೂಲ ಯೋಜನೆ ಹಳ್ಳ ಹಿಡಿಯಲು ಕಾರಣ. ಆದರೆ ಇಂದು ಬದಲಾವಣೆಯ ಕಾಲಘಟ್ಟದಲ್ಲಿ ಕುಡಿಯುವ ನೀರಿನ ಬೇಡಿಕೆ ಅತೀವವಾಗಿ ಏರ್ಪಟ್ಟಿರುವಾಗ ಕುಡಿಯುವ ನೀರು ಹಾಗೂ ಕೃಷಿ ಉಪಯೋಗಿ ನೀರನ್ನು ಪೂರೈಸಲು ವರಾಹಿ ನದಿ ನೀರನ್ನೇ ಬಳಸುತ್ತಿರುವ ಕಾರಣ ವರಾಹಿ ನದಿಯಲ್ಲಿ ವರ್ಷ ಪೂರ್ತಿ ಗಣನೀಯ ಪ್ರಮಾಣದಲ್ಲಿ ನೀರು ಹರಿಯುವ ಅವಶ್ಯಕತೆಯಿದೆ.
ಹೋರಿಯಬ್ಬೆಯಲ್ಲಿನ ಸುಮಾರು 1100 ಕ್ಯೂಸೆಕ್ಸ್ ನೀರು ಸಾಮರ್ಥ್ಯದ ಡೈವರ್ಶನ್ ವಿಯರ್ ಇರುವುದು ಕೇವಲ ವಾರಾಹಿ ಮೂಲ ಯೋಜನೆಯ ಕಾಲುವೆಗಳಿಗೆ ಬಿಟ್ಟರೆ ಇತರೇ ಯೋಜನೆಗಳಿಗಲ್ಲಾ. ಅದಕ್ಕಾಗಿ ಯಾವುದೇ ಇತರೆ ಯೋಜನೆ ಪ್ರಾರಂಭವಾಗುವುದಿದ್ದರೆ ಅದು ವರಾಹಿ ನದಿಯಿಂದಲೇ ನೇರವಾಗಿ ನೀರು ಎತ್ತುವ ಯೋಜನೆ ಆಗಬೇಕು ಬಿಟ್ಟರೆ ವರಾಹಿ ಕಾಲುವೆ ಇಲ್ಲಾ ನೇರವಾಗಿ ಹೋರಿಯಬ್ಬೆಯ ವರಾಹಿ ಡೈವರ್ಶನ್ ವಿಯರ್ ನಿಂದ ನೀರನ್ನು ಎತ್ತಬಾರದು. ವರಾಹಿ ನದಿ ನೀರನ್ನು ಬಳಸುವ ಕುಂದಾಪುರ ಪುರಸಭೆ ಹಾಗೂ ಸುಮಾರು ಹನ್ನೆರಡು ಗ್ರಾಮ ಪಂಚಾಯತ್ ಗಳಿಗೆ ಈ ಭಾರಿ ಕುಡಿಯುವ ನೀರಿನ ಸಮಸ್ಯೆ ಅತೀವವಾಗಿ ಕಾಡಿದೆ.
ಇನ್ನು ಬೇರೆ ಬೇರೆ ಯೋಜನೆ ಹೆಸರಿನಲ್ಲಿ ವರಾಹಿ ಕಾಲುವೆ ಇಲ್ಲಾ ಡೈವರ್ಶನ್ ವಿಯರ್ ನಿಂದ ನೀರು ಎತ್ತಿದರೆ ವರಾಹಿ ನದಿ ಬರಡಾಗುವುದರಲ್ಲಿ ಯಾವುದೇ ಅನುಮಾನವಿಲ್ಲಾ. ಅದಕ್ಕಾಗಿ ಸಿದ್ದಾಪುರ ಏತ ನೀರಾವರಿ ಹಾಗೂ ಮುಂದೆ ಕೈಗೊಳ್ಳುವ ಯಾವುದೇ ಹೊಸ ಹೊಸ ಯೋಜನೆಗಳನ್ನು ವರಾಹಿ ನದಿ ಪಾತ್ರದಲ್ಲೇ ಜಾಕ್ ವೆಲ್ ನಿರ್ಮಾಣ ಮಾಡಿ ವರಾಹಿ ನದಿಯಿಂದಲೇ ನೇರ ನೀರನ್ನು ಎತ್ತಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

