Site icon Kundapra.com ಕುಂದಾಪ್ರ ಡಾಟ್ ಕಾಂ

ಹೆಚ್ಚುವರಿ ಸರ್ಕಾರಿ ಬಸ್ ಸೇವೆಗೆ ಆಗ್ರಹ: ಕೆ. ವಿಕಾಸ್ ಹೆಗ್ಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಹೊಸಂಗಡಿ ಮತ್ತು ಮಾಸ್ತಿಕಟ್ಟೆ ಮದ್ಯದಲ್ಲಿ ಬಾಳೆಬರೆ ಘಾಟಿ ಕುಸಿದು ತಿಂಗಳುಗಳೇ ಕಳೆದರೂ ಸಹ ಘಾಟಿ ರಸ್ತೆ ಇನ್ನೂ ಘನ ವಾಹನಗಳ ಸಂಚಾರಕ್ಕೆ ಯೋಗ್ಯವಾಗದ ಕಾರಣ ಕುಂದಾಪುರ-ಬಸ್ರೂರು-ಸಿದ್ದಾಪುರ ಮಾರ್ಗವಾಗಿ ಸಾಗರ, ನಗರ, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ನಗರಗಳಿಗೆ ಸಂಚರಿಸುವ ಬಸ್ಸುಗಳು ತಮ್ಮ ಸಂಚಾರವನ್ನು ನಿಲ್ಲಿಸಿದ ಕಾರಣ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ತೆರಳಲು ಮತ್ತು ಉದ್ಯೋಗ ನಿಮಿತ್ತ ದೂರದ ಊರುಗಳಿಗೆ ಹೋಗುವ ಮಹಿಳೆಯರಿಗೆ ಹಾಗೂ ಪುರುಷರಿಗೆ ಉದ್ಯೋಗಕ್ಕೆ ತೆರಳಲು ಹಾಗೂ ಸಂಜೆ ಮೇಲೆ ಮನೆಗೆ ವಾಪಾಸ್ಸಾಗಲು ಅತೀವ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದರು.

ಬಾಳೆಬರೆ ಘಾಟಿ ಘನ ವಾಹನ ಸಂಚಾರಕ್ಕೆ ಯೋಗ್ಯವಾಗುವ ತನಕ ಈ ಮಾರ್ಗದಲ್ಲಿ ಖಾಸಗಿ ಬಸ್ಸುಗಳು ಸಂಚರಿಸದೆ ಇರುವುದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಕುಂದಾಪುರದಿಂದ ಹೊಸಂಗಡಿ ತನಕ ಹೆಚ್ಚುವರಿ ಬಸ್ಸುಗಳನ್ನು ಓಡಿಸುವುದರ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Exit mobile version