ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೈಂಟ್ ಥಾಮಸ್ ಸಿ.ಬಿ.ಎಸ್.ಇ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.
“ಪರಿಸರ ಸಂರಕ್ಷಿಸಿ ಜೀವ ಉಳಿಸಿ”ಎಂಬ ಘೋಷವಾಕ್ಯದಡಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಕಾರ್ಯಕ್ರಮದ ಮುಖ್ಯ ಉದ್ದೇಶ ಪರಿಸರ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಾಗಿತ್ತು.
ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲರಾದ ಫಾದರ್ ಫಿಲಿಪ್ ನೆಲ್ಲಿವಿಲ್ಲಾ ಉದ್ಘಾಟಿಸಿ ಮಾತನಾಡಿ, “ಪ್ರತಿ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು. ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುರಕ್ಷಿತವಾಗಿರುತ್ತದೆ”ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಘೋಷಣೆಗಳು, ಭಾಷಣಗಳು ಹಾಗೂ ಜಾಗೃತಿ ಸಂದೇಶಗಳನ್ನು ನೀಡಲಾಯಿತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರನ್ನು ಉಳಿಸುವುದು ಮತ್ತು ಹೆಚ್ಚು ಗಿಡಗಳನ್ನು ನೆಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶಿಕ್ಷಕರು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಗಾಗಿ ಪ್ರತಿಜ್ಞೆ ಸ್ವೀಕರಿಸಿದರು. ಪ್ರಾಂಶುಪಾಲರು, ಉಪಪ್ರಾಂಶುಪಲರು, ಶಿಕ್ಷಕರು , ವಿದ್ಯಾರ್ಥಿಗಳೊಂದಿಗೆ ಗಿಡವನ್ನು ನೆಡುವುದರ ಮೂಲಕ ಶಾಲಾ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

