ಬೈಂದೂರು: ಇತ್ತೀಚಿಗೆ ಅಕಾಲ ಮರಣಕ್ಕೆ ತುತ್ತಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಯು. ಕೇಶವ ಪ್ರಭು ಅವರಿಗೆ ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದಲ್ಲಿ ನುಡಿನಮನ ಸಲ್ಲಿಸಲಾಯಿತು.
ಕರ್ನಾಟಕ ಬ್ಯಾಂಕಿನ ಉದ್ಯೋಗಿಯಾಗಿದ್ದ ಕೇಶವ ಪ್ರಭು ನಿವೃತ್ತಿಯ ನಂತರ ಉಪ್ಪುಂದ ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನಿಯೂ ಆಗಿರುವ ಇವರಿಗೆ ಊರಿನ ಅಭಿಮಾನಿಗಳು ಸಂಘದ ಕಾರ್ಯಕರ್ತರು ಸಾಮೂಹಿಕವಾಗಿ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ತೆಕ್ಕಟ್ಟೆ ಸೇವಾಸಂಗಮ ಶಿಶುಮಂದಿರದ ವಿಶ್ವಸ್ಥ ಕೇಶವರಾಯ ಪ್ರಭು, ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ಅಧ್ಯಕ್ಷ ಬಿ.ಎ.ಮಂಜು ದೇವಾಡಿಗ, ಗೌರವಾಧ್ಯಕ್ಷ ಯು. ರಾಜೀವ ಭಟ್, ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಐತಾಳ್, ಕೋಟೇಶ್ವರ ಪೂರ್ವ ಗುರುಕುಲದ ವಿಶ್ವಸ್ಥ ಕೃಷ್ಣರಾಯ ಶ್ಯಾನುಭಾಗ್, ಸಹೋದರ ಯು. ಸದಾನಂದ ಪ್ರಭು ಇವರು ಪ್ರಭುಗಳ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡರು. ಪ್ರಾರಂಭದಲ್ಲಿ ಒಂದು ನಿಮಿಷಗಳ ಮೌನ ಪ್ರಾರ್ಥನೆ ಮಾಡುವುದರ ಮೂಲಕ ಮೃತರ ಆತ್ಮಕ್ಕೆ ಸದ್ಗತಿ ಕೋರಲಾಯಿತು.