ಬೈಂದೂರು: ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೇ ಕೆಲಸ ಮಾಡುತ್ತಾ ಬಂದಿದ್ದು ಕ್ಷೇತ್ರದ ಅಗತ್ಯತೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಭಾಗದ ರಸ್ತೆ, ದಾರಿದೀಪ, ಕುಡಿಯುವ ನೀರು ಮುಂತಾದ ಸೌಯರ್ಕಗಳನ್ನು ಸಮರ್ಪಕವಾಗಿ ಒದಗಿಸಿ ಬೈಂದೂರನ್ನು ಮಾದರಿ ನಗರವನ್ನಾಗಿ ಮಾಡುವ ಇಂಗಿತವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ 2.60ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳುತ್ತಿರುವ ಬೈಂದೂರು ರಾಹುತನಕಟ್ಟೆಯಿಂದ ಮಾಸ್ತಿಕಟ್ಟೆಯೊರೆಗಿನ ಹಳೆ ಎಂಬಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಬೈಂದೂರು ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆಗಾಗಿ 2015-16ನೇ ಸಾಲಿನಲ್ಲಿ 24 ಕಾಮಗಾರಿಗಳಿಗೆ 23.22ಕೋಟಿ ಅನುದಾನ ಮಂಜೂರಾಗಿದ್ದು ಹಂತ ಹಂತವಾಗಿ ಕ್ಷೇತ್ರದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡಲಾಗುತ್ತದೆ. ಚರಂಡಿ, ದಾರಿದೀಪ ಮುಂತಾದ ಕಾಮಗಾರಿಗಳನ್ನು ಮುಂದಿನ ಕ್ರೀಯಾಯೋಜನೆಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದರು. (ಕುಂದಾಪ್ರ ಡಾಟ್ ಕಾಂ)
ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಬೈಂದೂರು ಗ್ರಾ.ಪಂ ಅಧ್ಯಕ್ಷ ಜನಾರ್ಧನ್, ಯಡ್ತರೆ ಗ್ರಾ.ಪಂ ಉಪಾಧ್ಯಕ್ಷೆ ಕಲಾವತಿ ನಾಗರಾಜ್, ಸದಸ್ಯ ಮಾರ್ಟಿನ್ ಡಯಾಸ್, ಪಡುವರಿ ಗ್ರಾ.ಪಂ ಸದಸ್ಯ ವೆಂಕಟರಮಣ, ಸದಸ್ಯೆ ಸೂರ್ಯಕಾಂತಿ, ಸುಬ್ರಾಯ ಶೇರುಗಾರ್, ಇಂಜಿನೀಯರ್ ಚಂದ್ರಶೇಖರ್, ಗುತ್ತಿಗೆದಾರ ಗೋಕುಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ ಗಾಣಿಗ, ಮಣಿಕಂಠ ಮೊದಲಾದವರು ಉಪಸ್ಥಿತರಿದ್ದರು.
