Kundapra.com ಕುಂದಾಪ್ರ ಡಾಟ್ ಕಾಂ

ಅಚ್ಛೇದಿನ್‌ ಯಾವಾಗ ಬರುತ್ತೆ: ಗೋಪಾಲ್‌ ಭಂಡಾರಿ

ಹೆಬ್ರಿ: ಬಡವರ ಪರವಾದ ಕಾಂಗ್ರೆಸ್‌ ಪಕ್ಷ ಅಕ್ರಮ-ಸಕ್ರಮ 94 ಸಿ ಮುಂತಾದ ಕಾನೂನುಗಳನ್ನು ಜಾರಿಗೆ ತಂದು ಅಭಿವೃದ್ಧಿಯಲ್ಲಿ ಜನಪರವಾಗಿದೆ.ಆದರೆ ಈಗ ಏಕಾಏಕಿಯಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರ ಭೂ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು ಜನರು ಕಂಗಾಲಾಗಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಜನರ ಭಾವನೆಗಳಿಗೆ ಧ‌ಕ್ಕೆತರುವ ಕೇಂದ್ರ ಸರಕಾರ ಈ ಕೂಡಲೇ ಈ ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ ಅವರು ಪ್ರತಿಯೊಬ್ಬರ ಖಾತೆಗೆ 5 ಸಾವಿರ ರೂ. ಜಮೆ ಮಾಡುವುದಾಗಿ ಹೇಳಿದ ಮೋದಿ 5 ಪೈಸೆಯನ್ನೂ ಹಾಕಿಲ್ಲ. ಸದಾ ಸುಳ್ಳು ಹೇಳುವುದರ ಮೂಲಕ ಜನಪ್ರಿಯತೆಯನ್ನು ಕಂಡು ಕೊಂಡ ಮೋದಿಯಿಂದ ಅಚ್ಛೇದಿನ್‌ ಯಾವಾಗ ಬರಲು ಸಾಧ್ಯ ಎಂದು ಕಾರ್ಕಳ ಮಾಜಿ ಶಾಸಕ ಎಚ್‌ ಗೋಪಾಲ್‌ ಭಂಡಾರಿ ಹೇಳಿದರು.

ಅವರು  ಹೆಬ್ರಿ ಬಸ್‌ ಸ್ಟಾಂಡ್‌ ವಠಾರದಲ್ಲಿ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಡೆದ ಕೇಂದ್ರ ಬಿಜೆಪಿ ಸರಕಾರ ಭೂ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ತಂದ ಬಗ್ಗೆ ವಿರೋಧಿಸಿ ನಡೆದ ಪ್ರತಿಭಟನ ಸಭೆ ಹಾಗೂ ಧರಣಿ ಯಲ್ಲಿ ಭಾಗವಹಿಸಿ ಮಾತನಾಡಿದರು.

ನಮಗೆ ಓಟು ನೀಡಿದರೆ ಆಧಾರ್‌ ಕಾರ್ಡನ್ನು ರದ್ದು ಮಾಡುತ್ತೇವೆ ಎಂದು ಜನರನ್ನು ಮೋಸಗೊಳಿಸಿ ಮತಪಡೆದ ಮೋದಿ ಸರಕಾರ ಈಗ ಆಧಾರ್‌ ಕಡ್ಡಾಯ ಮಾಡಿದೆ ಎಂದರು.

Exit mobile version