Kundapra.com ಕುಂದಾಪ್ರ ಡಾಟ್ ಕಾಂ

ಜೆಸಿಐ ಉತ್ತಮ ನಾಯಕನನ್ನು ರೂಪಿಸುತ್ತಿದೆ: ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಉತ್ತಮ ನಾಯಕರನ್ನು ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.

ಅವರು ಜೆಸಿಐ ಬೈಂದೂರು ಸಿಟಿ ಆಯೋಜಿಸಿದ ಜೇಸಿ ಸಂಭ್ರಮ-2019ರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ಬಗೆಗೆ ಹಲವು ಯೋಜನೆಗಳಿದ್ದು, ನನ್ನ ಅಧಿಕಾರಾವಧಿಯೊಳಗೆ ಎಲ್ಲವನ್ನು ಅನುಷ್ಠಾನಗೊಳಿಸಲು ಸಂಪೂರ್ಣ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭ ಸಹಕಾರಿ ಕ್ಷೇತ್ರದ ಸಾಧನೆಗಾಗಿ ಎಸ್. ರಾಜು ಪೂಜಾರಿ ಹಾಗೂ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಡಾ. ಮಹೇಂದ್ರ ಭಟ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಬೈಂದೂರು ಸಿಟಿ ಅಧ್ಯಕ್ಷ ಮಣಿಕಂಠ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಉಪ್ಪುಂದ ಪ್ರಗತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರು, ಬೈಂದೂರು ರೋಟರಿ ಅಧ್ಯಕ್ಷ ಪ್ರಕಾಶ್ ಭಟ್, ಜೆಸಿಐ ವಲಯಾಧ್ಯಕ್ಷ ಅಬ್ದುಲ್ ಜಬ್ಬರ್ ಸಾಹೇಬ್, ಸಭಾಪತಿ ಸತೀಶ್ ಎಂ., ಜೇಸಿರೇಟ್ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ಸಂಯೋಜಕರಾದ ರಾಘವೇಂದ್ರ ಹೊಳ್ಳ, ಶ್ರೀಧರ ಆಚಾರ್ಯ, ಕಾರ್ಯದರ್ಶಿ ಎಚ್. ಸುಶಾಂತ್ ಬೈಂದೂರು, ಸಲಹೆಗಾರ ನರೇಂದ್ರ ಶೇಟ್, ಜೆಜೆಸಿ ಅಧ್ಯಕ್ಷ ಅಖಿಲೇಶ್ ಮೊದಲಾದವರು ಇದ್ದರು. ರಾಘವೇಂದ್ರ ಯಡ್ತರೆ ಹಾಗೂ ಭಾನುಮತಿ ಪ್ರಶಸ್ತಿ ಪುರಸ್ಕೃತರ ಪರಿಚಯ ವಾಚಿಸಿದರು. ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Exit mobile version