ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜದ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಮುಂಬಯಿಯ ಬಿಲ್ಲವ ಸೇವಾ ಸಂಘ ಕುಂದಾಪುರ, ಲಾಕ್ ಡೌನ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ ಅಸಹಾಯಕ ಸಮುದಾಯ ಬಾಂಧವರಿಗೆ ಹಾಗೂ ಸಂಕಷ್ಟಕ್ಕೆ ಸಿಲುಕಿದ ಕೆಲವು ಕುಟುಂಬಗಳಿಗೆ ದೈನಂದಿನ ಅಗತ್ಯ ವಸ್ತುಗಳು ವಿತರಿಸಿದ ಸಂಘ ನೊಂದ ಸದಸ್ಯರ ಪಾಲಿಗೆ ಆಶಾಕಿರಣವಾಗಿದೆ.
ಲಾಕ್ ಡೌನ್ ನಿಂದ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂಘದ ಸದಸ್ಯರಿಗೆ, ಸಮುದಾಯ ಬಾಂಧವರಿಗೆ ಮತ್ತು ಬಿಲ್ಲವರೇತರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದೆ. ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರ ನೇತೃತ್ವದಲ್ಲಿ ಸಮಾಜದ ದಾನಿಗಳು ಹಾಗೂ ಸಂಘದ ಆಡಳಿತ ಸಮಿತಿ ಮತ್ತು ಉಪಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ನಾಲಾಸೋಪಾರ, ವಿರಾರ್, ದಿಘಾ, ಐರೋಳಿ, ಸಾಯನ್, ಕುರ್ಲಾ, ಬಾಂಢೂಪ್, ಥಾಣೆ, ಡೊಂಬಿವಲಿ, ಠಾಕುರ್ಲಿ, ಅಂಬರನಾಥ್ ಮುಂತಾದ ಕಡೆಗಳಲ್ಲಿ ನೆಲೆಸಿರುವ ಸಂಕಷ್ಟಕ್ಕೀಡಾದ ಕೆಲವು ಕುಟುಂಬಗಳಿಗೆ ದೈನಂದಿನ ಆಹಾರ ಸಾಮಗ್ರಿಗಳನ್ನು ವಿತರಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ತುರ್ತು ಸಂದರ್ಭದಲ್ಲಿ ವಿನಿಯೋಗಿಸಲು ಸಂಘದಲ್ಲಿ ಯಾವುದೇ ಪ್ರತ್ಯೇಕ ನಿಧಿ ಇಲ್ಲದಿದ್ದರು ಕೂಡ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿಯವರು ಸಮಾಜದ ದಾನಿಗಳು ಹಾಗೂ ಆಡಳಿತ ಸಮಿತಿ ಮತ್ತು ಉಪಸಮಿತಿಗಳ ಸಹಕಾರದೊಂದಿಗೆ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ನೆರವು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ತೊಂದರೆಗೆ ಒಳಗಾದ ಸದಸ್ಯ ಬಾಂಧವರು ಮುಂಬಯಿನಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಪರಿತಪಿಸುತ್ತಿರುವುದನ್ನು ಮನಗಂಡು ಅಲ್ಲದೇ ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಕುಟುಂಬಗಳು ತೊಂದರೆಗೆ ಸಿಲುಕುವುದನ್ನು ತಪ್ಪಿಸುವ ಸಲುವಾಗಿ ಎಪ್ರಿಲ್ ತಿಂಗಳ ಮೊದಲ ವಾರದಿಂದಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿಯ ಸಮಸ್ಯೆ ಮನವರಿಕೆ ಮಾಡಿಕೊಡಲು ಸಾಕಷ್ಟು ಪ್ರಯತ್ನಿಸಿದ್ದರು.
ಸಂಘದ ಮಾಜಿ ಅಧ್ಯಕ್ಷರಾದ ಉದ್ಯಮಿ ಮಂಜುನಾಥ ಬಿಲ್ಲವ ಶಿರೂರು, ಉದ್ಯಮಿ ಶ್ರೀಧರ ಪೂಜಾರಿ ಉಪ್ಪುಂದ, ಪೂರ್ಣಿಮಾ ಎಸ್. ಪೂಜಾರಿ ಬಾಂಢೂಪ್, ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ, ಮಾಜಿ ಕೋಶಾಧಿಕಾರಿ ಅಶೋಕ್ ಎನ್. ಪೂಜಾರಿ ಮತ್ತು ಧಾರ್ಮಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ಎಮ್. ಪೂಜಾರಿ ವಿಶೇಷ ಸಹಕಾರ ನೀಡಿದರೆ ಆಡಳಿತ ಸಮಿತಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯ ಯಶಸ್ವಿಯಾಗಲು ಸಹಕರಿಸಿದ್ದರು.
ಬಿಲ್ಲವ ಸೇವಾ ಸಂಘ ಕುಂದಾಪುರ ರಿ. ಮುಂಬಯಿ – ಶ್ರೀ ನಾರಾಯಣ ಗುರುಗಳ ತತ್ವ – ಉಪದೇಶಗಳನ್ನು ಅಳವಡಿಸಿಕೊಂಡು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿವರ್ಷ ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡುವುದಲ್ಲದೆ ಅಸಹಾಯಕ ಸಮಾಜ ಬಾಂಧವರಿಗೆ ವೈದ್ಯಕೀಯ ನೆರವು ನೀಡುತ್ತಾ, ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಾ ಬಂದಿರುವ ಸಂಘವು ಸದಸ್ಯ ಬಾಂಧವರ ಸುಖ-ದುಃಖಗಳಿಗೆ ಸದಾ ಸ್ಪಂದಿಸಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ.
ಇದನ್ನೂ ಓದಿ:
► ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು 80 ಕಡೆ ಸೀಲ್ ಡೌನ್ – https://kundapraa.com/?p=38288 .
► ಉಡುಪಿ ಜಿಲ್ಲೆ: ಗುರುವಾರ 92 ಕೊರೋನಾ ಪಾಸಿಟಿವ್ – https://kundapraa.com/?p=38278 .