ಬೈಂದೂರು: ಆ ಮನೆಯವರೆಲ್ಲಾ ಮದುವೆಯ ಸಂಭ್ರಮದಲ್ಲಿದ್ದರು. ಇನ್ನೇನು ಎರಡು ದಿನ ಕಳೆದರೆ ಮದುವೆ ನಡೆದು ಹೋಗುವುದಿತ್ತು. ಆದರೆ ಮದುಮಗಳು ಮಾತ್ರ ಏಕಾಏಕಿ ನಾಪತ್ತೆಯಾಗಿದ್ದಾಳೆ! ಮದುವೆಯ ಸಡಗರವಿರಬೇಕಿದ್ದ ಮನೆಯಲ್ಲೀಗ ಈಗ ನೀರವ ಮೌನ ಆವರಿಸಿಕೊಂಡಿದೆ. ಇತ್ತಕಡೆ ವಧುವಿನ ಪ್ರಿಯಕನಾಗಿರುವ ಅನ್ಯಕೋಮಿನ ಯುವಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ನಾಪತ್ತೆಯಾದವಳ ಸುಳಿವು ಮಾತ್ರ ಇನ್ನೂ ಲಭ್ಯವಾಗಿಲ್ಲ.
ಪ್ರಕರಣದ ವಿವರ:
ಶಿರೂರು ಗ್ರಾಮದ ದೊಂಬೆಯ ಪಡಿಯಾರಹಿತ್ಲು ರಾಮಚಂದ್ರ ಎಂಬುವವರ ಪುತ್ರಿ ಮಮತಾ (24) ಎಂಬುವವರಿಗೆ ಮೇ.3ರಂದು ವರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮಮತಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ತನಗೆ ಈ ಮದುವೆ ಇಷ್ಟವಿಲ್ಲ. ತಾನು ಬೆರೋಬ್ಬರನ್ನು ಪ್ರೀತಿಸಿರುವುದಾಗಿ ಆಕೆ ಮನೆಯವರಲ್ಲಿ ತಿಳಿಸಿದ್ದಾಗ, ಮನೆಯವರು ಇದಕ್ಕೆ ಸಹಜವಾಗಿ ಪ್ರತಿರೋಧವೊಡ್ಡಿದ್ದರು. ಪ್ರೀತಿಸಿದ ಹುಡುಗನ್ನು ಮರೆತು, ಮನೆಯವರು ಗೊತ್ತುಪಡಿಸಿದ ಹುಡುಗನೊಂದಿಗೆ ವಿವಾಹವಾಗಲು ಒಪ್ಪಿಸಿದ್ದರು. ಮೊದಲು ಮನೆಯವರು ಒಪ್ಪಿದ ಹುಡುಗನೊಂದಿಗೆ ವಿವಾಹವಾಗಲು ಅರೆಸಮ್ಮತಿ ಸೂಚಿಸಿದ್ದ ಮಮತಾ ಮದುವೆ ದಿನ ಹತ್ತಿರವಿರುವಾಗ ಮತ್ತೆ ಕ್ಯಾತೆ ತೆಗೆದಿದ್ದಳು.
ಎಪ್ರಿಲ್ 28ನೇ ತಾರೀಕಿನಂದು ಬೈಂದೂರು ಠಾಣೆಗೆ ಬಂದ ಮಮತಾ ತನಗೆ ಇಷ್ಟವಿಲ್ಲದ ಹುಡುನೊಂದಿಗೆ ಮನೆಯವರು ಒತ್ತಾಯದಿಂದ ಮದುವೆ ಮಾಡಿಸುತ್ತಿದ್ದಾರೆ. ಈ ವಿಚಾರವಾಗಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ತಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುವುದಾಗಿ ತಿಳಿಸಿದ್ದಾಳೆ. ಬಳಿಕ ತನ್ನ ಪ್ರಿಯಕರನಿಗೂ ಪೋನ್ ಮಾಡಿ ಪೊಲೀಸ್ ಠಾಣೆಗೆ ಬರಹೇಳಿದ್ದಾಳೆ. ಪೊಲೀಸರು ಆಕೆಯ ಮನೆಯವರನ್ನು ಕರೆಯಿಸಿಕೊಂಡು ಅವರ ಸಮ್ಮುಖದಲ್ಲಿಯೇ ಹುಡುಗ ಹುಡುಗಿ ಇಬ್ಬರಿಗೂ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ. ಮನೆಯಲ್ಲಿಯೂ ಇದೆ ವಿಚಾರಕ್ಕೆ ರಾದ್ದಾಂತ ನಡೆದಿತ್ತು ಎನ್ನಲಾಗಿದೆ. ತಂದೆ ಮರ್ಯಾದೆಗಂಜಿ ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿದ್ದಾರೆನ್ನಲಾಗಿದೆ. ಒಂದು ದಿನ ಸುಮ್ಮನಾಗಿದ್ದ ಹುಡುಗಿ ಎಪ್ರಿಲ್ 30ರ ಬೆಳಿಗ್ಗೆ ಮನೆಯಿಂದ ಹೊರಗೆ ಹೊದವಳು ಮರಳಿ ಬಂದಿಲ್ಲ. ಸಂಜೆಯ ವರೆಗೆ ಸ್ನೇಹಿತರ ಮನೆಗೆ ಹೊಗಿರಬಹುದು ಎಂದು ತಿಳಿದಿದ್ದ ಮನೆಯವರು ರಾತ್ರಿಯಾದರೂ ಮಗಳು ಮನೆಗೆ ಬಾರದಿದ್ದುದರಿಂದ ಗಾಬರಿಗೊಂಡು ಕೆಲವು ಸಂಬಂಧಿ ಹಾಗೂ ಮಮತಾಳ ಸ್ನೇಹಿತೆಯರ ಮನೆಯಲ್ಲಿ ವಿಚಾರಿಸಿದ್ದಾರೆ. ಅಲ್ಲಿಯೂ ಇಲ್ಲದಿರುವುದು ಖಾತ್ರಿಯಾದಾಗ ಆಕೆಯ ಪ್ರೀಯಕರನೊಂದಿಗೆ ಹೋಗಿರಬೇಕೆಂದು ಅನುಮಾನಗೊಂಡು ಆಕೆಯ ಪ್ರಿಯಕರನ ವಿರುದ್ಧ ಮೇ.1ರ ಬೆಳಿಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ಆರಂಭಿಸಿದ್ದು ಆಕೆಯ ಪ್ರಿಯಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆಕೆ ತನ್ನೊಂದಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ವಿವಿಧ ಹಂತದಲ್ಲಿ ತನಿಕೆ ಮುಂದುವರಿಸಿರುವ ಬೈಂದೂರು ಪೊಲೀಸರು ಆಕೆಯ ಮನೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
ನಾಲ್ಕು ವರ್ಷದ ಪ್ರೀತಿ:
ಕಾಣೆಯಾಗಿರುವ ಮಮತಾ ಹಾಗೂ ಸುಹೈಲ್ ಎಂಬಾತನೊಂದಿಗೆ ನಾಲ್ಕು ವರ್ಷಗಳಿಂದ ಪ್ರೀತಿ ಇತ್ತೆನ್ನಲಾಗಿದೆ. ಹುಡುಗ ಅನ್ಯ ಕೋಮಿನವನಾದ್ದರಿಂದ ಇಬ್ಬರ ಮನೆಯಲ್ಲೂ ತೀವ್ರ ವಿರೋಧವಿತ್ತು. ಹುಡುಗಿಯ ವಿರೋಧದ ನಡುವೆಯೂ ಬೇರೊಬ್ಬ ಹುಡುಗನೊಂದಿಗೆ ವಿವಾಹವನ್ನು ನಿಶ್ಚಯ ಮಾಡಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ಮಮತಾ ಎ.28ರಂದು ಠಾಣೆಗೆ ಬಂದು ತನ್ನ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾಳೆ. ಪ್ರೇಮ ಪ್ರಕರಣ ಠಾಣೆ ಮಟ್ಟಿಲೇರಿ ಪೊಲೀಸರು ಬುದ್ಧಿವಾದ ಹೇಳಿದ ಬಳಿಕ ಪ್ರಿಯಕರನೂ ಆಕೆಯಿಂದ ದೂರವೇ ಉಳಿದಿದ್ದ ಎನ್ನಲಾಗಿದೆ.
ಮದುವೆಯಾಗುವ ವರನೂ ಒಲ್ಲೆ ಎಂದ:
ಇನ್ನೊಂದೆಡೆ ಮಮತಾಳ ಪ್ರೇಮ ಪ್ರಕರಣ ಠಾಣೆಯ ಮೇಟ್ಟಿಲೇರಿವುದು ತಿಳಿದ ವರ ಆಕೆಯನ್ನು ಮದುವೆಯಾಗಲು ನೀರಾಕರಿಸಿದ್ದ ಎಂಬ ಮಾತುಗಳೂ ಕೇಳಿ ಬಂದಿವೆ. ಅತ್ತ ಪ್ರಿಯಕರನೂ ಇಲ್ಲ. ಇತ್ತ ಮದುವೆಗೆ ನಿಶ್ಚಯವಾದ ವರನೂ ಇಲ್ಲ ಎಂಬಂತಾಗಿತ್ತು ಆಕೆಯ ಸ್ಥಿತಿ. ಇದರಿಂದ ಮಮತಾ ಮತ್ತಷ್ಟು ನೊಂದುಕೊಂಡಿದ್ದಳು.
ಏಲ್ಲಿ ಹೋದಳು ಮಮತಾ?
ಎಪ್ರಿಲ್ 30ರಂದು ಮನೆಯಿಂದ ತೆರಳಿದ ಮಮತಾಳ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಸ್ನೇಹಿತರು, ಸಂಬಂಧಿಗಳ ಮನೆಯಲ್ಲಿ ಇಲ್ಲ ಎಂಬುದು ಸದ್ಯಕ್ಕೆ ಖಾತ್ರಿಯಾಗಿದೆ. ಪ್ರಿಯಕರ ತನ್ನ ಬಳಿ ಬಂದಿಲ್ಲ ಎಂದು ಹೇಳಿಕೊಂಡಿದ್ದಾನೆ. ಆದರೆ ಈತನೇ ನಾಟಕವಾಡುತ್ತಿರಬಹುದೇ ಎಂಬ ಅನುಮಾನ ಕೂಡ ಕೆಲವರನ್ನು ಕಾಡುತ್ತಿದೆ. ಮನೆಬಿಟ್ಟ ತೆರಳಿದ ಯುವತಿ ತನ್ನ ಮೊಬೈಲನ್ನು ಮನೆಯಲ್ಲೇ ಇಟ್ಟು ತೆರಳಿದ್ದಾಳೆ, ಹಣ, ಚಿನ್ನವನ್ನು ಕೊಂಡೊಯ್ದಿಲ್ಲ. ಇದು ತನಿಕೆಯ ಹಾದಿ ತಪ್ಪಿಸುವ ಪ್ರಯತ್ನ ಇದ್ದಿರಬಹುದೇ, ನಿಶ್ಚಯವಾದ ಮದುವೆಯನ್ನು ತಪ್ಪಿಸುವ ಮಾಡಿದ ಕೆಲಸವೇ? ಅಥವಾ ಇನ್ಯಾವುದೋ ಅನಾಹುತಕ್ಕೆ ತೆರೆದುಕೊಂಡಳೇ? ಯಾವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.