ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜು.19: ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ಷಿಪ್ರಗತಿಯಲ್ಲಿ ಪ್ರಕರಣಗಳನ್ನು ಭೇದಿಸಿದ ವೃತ್ತ ನಿರೀಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ ಮತ್ತು ಉಪನಿರೀಕ್ಷಕ ಪವನ್ ನಾಯಕ್ ಅವರನ್ನು ಬೈಂದೂರು ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಬಂಟರ ಸಂಘದ ಅಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ ಸನ್ಮಾನಿಸಿ ಮಾತನಾಡಿ ಎರಡು ತಿಂಗಳಲ್ಲಿ ಈ ಭಾಗದಲ್ಲಿ ನಡೆದ ಸರಣಿ ಕಳ್ಳತನ ಹಾಗೂ ಇತ್ತೀಚಿನ ಹೇನಬೇರು ಕೊಲೆ ಪ್ರಕರಣದ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಶಿರೂರು ನಿರ್ಗದ್ದೆ ಹತ್ತಿರ ಬಸ್ಸಿನಲ್ಲಿದ್ದ ಪ್ರಯಾಣಿಕರ ಚಿನ್ನವನ್ನು ಕಳ್ಳತನ ಮಾಡಿದ ಅಪರಾಧಿಗಳನ್ನು 15 ದಿನದೊಳಗೆ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಇಂತಹ ಸಮಾಜ ಘಾತುಕ ಖದೀಮರ ನಿದ್ದೆಗೆಡಿಸಿದ ಬೈಂದೂರು ಪೋಲೀಸ್ ತಂಡದ ಕಾರ್ಯ ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತ ನೀರಿಕ್ಷಕ ಸಂತೋಷ್ ಆನಂದ್ ಕಾಯ್ಕಿಣಿ, ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಈ ಮೂರು ಸವಾಲಿನ ಪ್ರಕರಣಗಳನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ಠಾಣೆಯ ಎಲ್ಲಾ ಸಿಬ್ಬಂದಿಗಳು ಕೂಡ ಈ ಕಾರ್ಯಾಚರಣೆ ಯಶಸ್ಸಿನ ಪಾಲುದಾರರು. ಪೋಲಿಸರಿಗೆ ಸಮಾಜದ ರಕ್ಷಣೆಯ ಜವಾಬ್ದಾರಿ ಹೆಚ್ಚಿರುವುದರಿಂದ ಮುಂದಿನ ದಿನಗಳಲ್ಲಿಯೂ ಕೂಡ ಬೈಂದೂರು ಠಾಣೆಯ ಎಲ್ಲಾ ಸಿಬ್ಬಂದಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತೇವೆ. ಎಲ್ಲರ ಸಹಕಾರವೂ ಅಗತ್ಯ ಎಂದರು.
ಸಂಘದ ಗೌರವಾಧ್ಯಕ್ಷ ಚುಚ್ಚಿ ನಾರಾಯಣ ಶೆಟ್ಟಿ, ಪದಾಧಿಕಾರಿಗಳಾದ ಜಿ. ಗೋಕುಲ್ ಶೆಟ್ಟಿ, ವಾಜುರಾಜ್ ಶೆಟ್ಟಿ, ಎಚ್. ವಿಜಯ್ ಶೆಟ್ಟಿ, ಜಿ. ಕುಶಲ್ ಶೆಟ್ಟಿ, ಬಿ. ನಿತಿನ್ ಶೆಟ್ಟಿ, ಸಂತೋಷ್ಕುಮಾರ್ ಶೆಟ್ಟಿ, ಬಿಜೂರು ಜಯರಾಮ ಶೆಟ್ಟಿ, ಬಟ್ನಾಡಿ ಅಣ್ಣಪ್ಪ ಶೆಟ್ಟಿ ಮೊದಲಾದವರು ಇದ್ದರು. ಸಂಘದ ಕಾರ್ಯದರ್ಶಿ ಜಗದೀಶ ಶೆಟ್ಟಿ ಕುದ್ರುಕೋಡು ಸ್ವಾಗತಿಸಿ, ಉಪಾಧ್ಯಕ್ಷ ಕರಣಾಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.