ಕಬಾಬ್ ಮಾರುವ ಬಿದಿ ಬದಿ ವ್ಯಾಪಾರಿ, ಮಿಮಿಕ್ರಿ ಆರ್ಟಿಸ್ಟ್ಗೆ ವೇಷ ಹಾಕಿಸಿ 5 ಕೋಟಿ ವಂಚನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಸೆ.12: ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಉದ್ಯಮಿಯೋರ್ವರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸಹಿತ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
8 ಮಂದಿ ವಿರುದ್ಧ ದೂರು:
ಸೆ.8ರಂದು ಬೈಂದೂರು ಬಿಜೆಪಿ ಮುಖಂಡ, ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನಲ್ಲಿ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಹಾಗೂ ತಂಡವನ್ನು ಉಡುಪಿ ಕೃಷ್ಣ ಮಠದ ಹಾಗೂ ಬೆಂಗಳೂರಿನಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪ್ರಕರಣದ 1ನೇ ಆರೋಪಿ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ್ ನಾಯಕ್, ರಮೇಶ್ ಹಾಗೂ ಧನರಾಜ್ ಎಂಬ ಐವರನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ 3ನೇ ಆರೋಪಿ ಹೊಸಪೇಟೆಯ ಅಭಿನವ ಹಾಲಶ್ರೀ ಸ್ವಾಮೀಜಿ, 5ನೇ ಆರೋಪಿ ನಾಯ್ಕ್ ಎಂಬಾತನನ್ನು ಇನ್ನಷ್ಟೇ ಬಂಧಿಸಬೇಕಿದ್ದು, 8ನೇ ಆರೋಪಿ ಪ್ರಸಾದ್ ಬೈಂದೂರು ಎಂಬಾತನನ್ನು ಬೆಂಗಳೂರಿನಲ್ಲಿ ವಿಚಾರಣೆಗೆ ಕರೆಸಿದ್ದಾರೆ.
ಆರ್.ಎಸ್.ಎಸ್, ಕೇಂದ್ರ ನಾಯಕರು ಎಂದು ನಕಲಿ ವ್ಯಕ್ತಿಗಳನ್ನು ಭೇಟಿ ಮಾಡಿಸಿದ್ದ ವಂಚಕರು:
ಉದ್ಯಮದ ಜೊತೆಗೆ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಗೋವಿಂದ ಬಾಬು ಪೂಜಾರಿ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ತಯಾರಿಯಲ್ಲಿದ್ದರು. ಈ ವೇಳೆ ಅವರ ಸಹಾಯಕನಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರಸಾದ್ ಬೈಂದೂರು ಎಂಬಾತ, ಚೈತ್ರಾ ಕುಂದಾಪುರ ಎಂಬ ಹಿಂದೂ ಸಂಘಟನೆಯ ನಾಯಕಿಯನ್ನು ಮೊದಲಿಗೆ ಪರಿಚಯ ಮಾಡಿಸುತ್ತಾನೆ. 2023ರ ಚುನಾವಣೆಯಲ್ಲಿ ಎಂ.ಎಲ್.ಎ ಸ್ಥಾನಕ್ಕೆ ತಾವು ಸ್ಪರ್ಧಿಸಬೇಕು. ನನಗೆ ಬಿಜೆಪಿ ಆರ್ಎಸ್ಎಸ್ ಮೊದಲಾದ ಕೇಂದ್ರದ ವರಿಷ್ಠರ ಸಂಪರ್ಕವಿದ್ದು ಅವರ ಮೂಲಕ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕಥೆ ಕಟ್ಟುತ್ತಾಳೆ. ಆಕೆಯನ್ನು ಬಹುದೊಡ್ಡ ನಾಯಕಿ ಎಂಬುದಾಗಿ ಬಿಂಬಿಸಿ ಗೋವಿಂದ ಬಾಬು ಪೂಜಾರಿ ಅವರ ಕಛೇರಿ ಹಾಗೂ ಕಾರ್ಯಕ್ರಮಗಳಿಗೆ ನಿರಂತರವಾಗಿ ಆಹ್ವಾನಿಸಲಾಗುತ್ತದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಮೊದಲು ಗಗನ್ ಕಡೂರು ಎಂಬಾತನನ್ನು ಚಿಕ್ಕಮಂಗಳೂರಿನ ಅತಿಥಿ ಗೃಹದಲ್ಲಿ 04.07.2022ರಲ್ಲಿ ಭೇಟಿ ಮಾಡಿಸಿ ಪ್ರಧಾನಿ ಕಛೇರಿಯ ನಿಕಟವರ್ತಿ ಎಂಬಂತೆ ಬಿಂಬಿಸಲಾಗಿತ್ತು. ವಂಚನೆಗೆ ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರನ್ನು ಬಳಸಿಕೊಂಡದ್ದಲ್ಲದೇ, ಆರ್ ಎಸ್ ಎಸ್ ಪ್ರಮುಖ ವಿಶ್ವನಾಥ ಜೀ [ಬಂಧಿತ ರಮೇಶ್] ಎಂಬ ನಕಲಿ ನಾಯಕರನ್ನು ಸೃಷ್ಟಿಸಿ ಅತನನ್ನೂ ಚಿಕ್ಕಮಂಗಳೂರಿನಲ್ಲಿ ಭೇಟಿ ಮಾಡಿಸಿ ನಂಬಿಸಲಾಗಿತ್ತು.
ಚೈತ್ರಾ ಕುಂದಾಪುರ ಹಾಗೂ ಗಗನ್ ಇಬ್ಬರೂ ಸೇರಿ ಕೇಂದ್ರದ ಅಭ್ಯರ್ಥಿ ಆಯ್ಕೆ ಸಮಿತಿಯಲ್ಲಿರುವ ವಿಶ್ವನಾಥ ಜೀ ಮೂಲಕ ಟಿಕೆಟ್ ಕೊಡಿಸುವ ಕಥೆ ಕಟ್ಟಿದ್ದರು. ವಿಶ್ವನಾಥ ಜೀ ಹೆಸರಿನ ವ್ಯಕ್ತಿ ಟಿಕೆಟ್ ಪಡೆಯಲು ಹಣ ನೀಡಲೇಬೇಕು ಎಂದು ಮೊದಲು 50 ಲಕ್ಷ, ನಂತರ ಆಯ್ಕೆ ಪ್ರಕ್ರಿಯೆ ವೇಳೆ 3 ಕೋಟಿ ನೀಡುವಂತೆ ಬೇಡಿಕೆ ಇರಿಸಿದ್ದಲ್ಲದೇ, ಟಿಕೆಟ್ ದೊರೆಯದಿದ್ದರೆ ಹಣ ಹಿಂದಿರುಗಿಸುವ ಭರವಸೆ ನೀಡಿದ್ದ.
ಒಟ್ಟು 5 ಕೋಟಿ ವಂಚನೆ ಆರೋಪ:
ಮಾತಿನಂತೆ ಮೊದಲು 50 ಲಕ್ಷವನ್ನು ಪ್ರಸಾದ್ ಬೈಂದೂರು ಎಂಬಾತನ ಮೂಲಕ ಗಗನ್ ಎಂಬಾತನಿಗೆ ನೀಡಲಾಗಿತ್ತು. ಕೆಲ ದಿನದ ಬಳಿಕ ಅಭಿನವ ಹಾಲಶ್ರೀ ಸ್ವಾಮೀಜಿ ಟಿಕೆಟ್ ಹಂಚಿಕೆಯಲ್ಲಿ ಕರ್ನಾಟಕದ ಜವಾಬ್ದಾರಿ ಹೊಂದಿದ್ದು, ಅವರನ್ನು ಸಂಪರ್ಕಿಸುವಂತೆ ಇದೇ ತಂಡ ಸೂಚನೆ ನೀಡಿತ್ತು. ಅಭಿನವ ಹಾಲಶ್ರೀಯನ್ನು ಭೇಟಿಯಾದ ಸಂದರ್ಭ ತಮಗೆ 1.50 ಕೋಟಿ ನೀಡುವಂತೆ ಭೇಟಿ ಇರಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ 16.01.2023ರಂದು ಅವರಿಗೆ 1.50ಕೋಟಿ ಹಣ ನೀಡಲಾಗಿತ್ತು. ಈ ನಡುವೆ ಚೈತ್ರಾ ಮತ್ತು ಗ್ಯಾಂಗ್ ಬೆಂಗಳೂರಿನಲ್ಲಿ ನಾಯ್ಕ್ ಎಂಬಾತನನ್ನು ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯಿಸಿ, ಬಿಜೆಪಿ ಟಿಕೆಟ್ ದೊರೆಯುವುದು ಖಾತರಿಯಾಗಿದೆ ಎಂದು ನಂಬಿಸಿದ್ದರು. ಅದರಂತೆ 29.10.2022ರಂದು ಬಾಕಿ 3 ಕೋಟಿ ಹಣವನ್ನು ಮಂಗಳೂರಿನಲ್ಲಿ ಭೇಟಿಯಾಗಿ ನೀಡಲಾಗಿತ್ತು. /ಕುಂದಾಪ್ರ ಡಾಟ್ ಕಾಂ ಸುದ್ದಿ/
ವಿಶ್ವನಾಥ ಜೀ ಕಾಶ್ಮಿರದಲ್ಲಿ ಸತ್ತುಹೋದರೆಂಬ ನಾಟಕ:
ವಿಶ್ವನಾಥ ಜೀ ಎಂಬಾತನಿಗೆ ದುಡ್ಡು ನೀಡಿರುವುದಾಗಿ, ಬಳಿಕ ಆತನೇ ಕಾಶ್ಮೀರದಲ್ಲಿ ಸತ್ತು ಹೋಗಿರುವುದಾಗಿ ವಂಚಕ ತಂಡವು 08.03.2023ರಂದು ಗೊವಿಂದ ಪೂಜಾರಿ ಅವರನ್ನು ನಂಬಿಸುವ ಪ್ರಯತ್ನ ಮಾಡಿತ್ತು. ವಿಶ್ವನಾಥ ಜೀ ಎಂಬ ವ್ಯಕ್ತಿಯ ಬಗ್ಗೆ ಅನುಮಾನಗೊಂಡ ಗೋವಿಂದ ಬಾಬು ಪೂಜಾರಿ ಅವರು ಕಾಶ್ಮಿರದ ನಿವೃತ್ತ ಸೇನಾಧಿಕಾರಿಯನ್ನು ಸಂಪರ್ಕಿಸಿದಾಗಿ ಅಂತ ಯಾವುದೇ ವ್ಯಕ್ತಿ ಇಲ್ಲ ಎಂಬುದು ಬೆಳಕಿಗೆ ಬಂದಿದೆ.

ವಿಷ ಕುಡಿಯುವುದಾಗಿ ನಾಟಕ ಮಾಡಿದ ಚೈತ್ರಾ:
ವಂಚನೆ ಮಾಡಿದ್ದಾರೆಂಬುದು ಖಾತ್ರಿಯಾದಂತೆ ಹಣ ಹಿಂತಿರುಗಿಸುವಂತೆ ತಿಳಿಸಿದಾಗ ಚೈತ್ರಾ ಕುಂದಾಪುರ ಎಂಬಾಕೆ ವಿಷದ ಬಾಟಲಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಳು. ಕೆಲ ಸಮಯದಲ್ಲಿ ಹಣ ಹಿಂದಿರುಗಿಸುವುದಾಗಿ ಹೇಳಿ ಗೋವಿಂದ ಪೂಜಾರಿ ಅವರ ಕಛೇರಿಯಿಂದ ಕಾಲ್ಕಿತ್ತಿದ್ದ ಚೈತ್ರಾ ಮತ್ತು ಗ್ಯಾಂಗ್ ಮತ್ತು ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿತ್ತು. ಈನಡುವೆ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಭೇಟಿ ಮಾಡಿದಾಗ ವಿಶ್ವನಾಥ ಜೀ ಎಂಬುವವರ ಪರಿಚಯವಿಲ್ಲ. ಒಂದು ತಿಂಗಳಲ್ಲಿ ಹಣ ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದರು.
ಆರ್ಎಸ್ಎಸ್ ನಾಯಕರ ಗೆಟಪ್, ಮಿಮಿಕ್ರಿ ಮಾಡಿ ವಂಚನೆ:
ಪ್ರಕರಣದ ಹಿಂದೆ ಹೊರಟಾಗ ಚಿಕ್ಕಮಂಗಳೂರಿನ ಸೆಲೂನ್ ಒಂದರಲ್ಲಿ ಆರ್.ಎಸ್.ಎಸ್ ನಾಯಕ ಎಂಬಂತೆ ತೋರ್ಪಡಿಸಿಕೊಳ್ಳಲು ರಮೇಶ್ ಹಾಗೂ ಧನರಾಜ್ ಎಂಬುವವರು ಗೆಟಪ್ ಬದಲಿಸಿಕೊಂಡಿದ್ದು ಬಯಲಾಗಿತ್ತು. ಚಿಕ್ಕಮಂಗಳೂರಿನ ರಮೇಶ್ ಎಂಬಾತ ವಿಶ್ವನಾಥ ಜೀ ಹೆಸರಿನಲ್ಲಿ ನಟನೆ ಮಾಡಿದ್ದ. ಹೀಗೆ ನಟಿಸಲು ಚೈತ್ರಾ ಕುಂದಾಪುರ ಹಾಗೂ ಗಗನ್ ಎಂಬಾತ 1.5 ಲಕ್ಷ ಹಣ ಹಾಗೂ ವಾಹನಕ್ಕಾಗಿ 2.5 ಲಕ್ಷ ಹಣ ನೀಡಿದ್ದರು. ಕೇಂದ್ರ ನಾಯಕರ ಹೆಸರಿನಲ್ಲಿ ಕರೆ ಮಾಡಿದಾಗ ಮಿಮಿಕ್ರಿ ಮಾಡಲು ಧನರಾಜ್ ಎಂಬಾತನನ್ನು ಬಳಸಿಕೊಳ್ಳಲಾಗಿತ್ತು. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಬೀದಿಬದಿ ವ್ಯಾಪಾರಿಯನ್ನು ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದ ವಂಚಕರು:
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಹೇಳಿಕೊಂಡು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ಬದಿ ವ್ಯಾಪಾರಿಯನ್ನು ಕರೆತಂದು ನಟಿಸಲು ತರಬೇತಿ ನೀಡಿದ್ದರು. ವ್ಯಾಪಾರಿ ನಾಯ್ಕ್ ಎಂಬಾತನಿಗೆ ರೂ. 93,000 ನೀಡಿ ಈ ವಿಚಾರ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಚೈತ್ರಾ ಬೆದರಿಕೆ ಹಾಕಿಸಿದ್ದಳು.
ಒಟ್ಟಿನಲ್ಲಿ ಚುನಾವಣೆಯ ಸಂದರ್ಭ ಬಿಜೆಪಿ ಎಂಎಲ್ಎ ಟಿಕೆಟ್ ಹೆಸರನಲ್ಲಿ ನಡೆಸಿದ ಬಹುದೊಡ್ಡ ವಂಚನೆಯ ಜಾಲ ಪೊಲೀಸರಿಗೆ ಅತಿಥಿಯಾಗಿದೆ. ಗೋವಿಂದ ಬಾಬು ಪೂಜಾರಿ ಅವರು ಸಂಘಟನೆಯ ಪ್ರಮುಖರಿಗೆ ಬರೆದಿದ್ದ ಪತ್ರದ ಮೂಲಕ ಈ ವಂಚನೆ ಬೆಳಕಿಗೆ ಬಂದಿತ್ತು. ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ ಬಳಿಕ ಆರೋಪಿಗಳ ಬಂಧನವಾಗಿದೆ. ಇದೇ ರೀತಿ ಬೇರೆ ನಾಯಕರಿಗೂ ವಂಚಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ವಿಚಾರಣೆಯ ಬಳಿಕ ಸತ್ಯ ಸಂಗತಿ ಬಯಲಿಗೆ ಬರಲಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಚೈತ್ರಾ ಕುಂದಾಪುರ ಸಹಿತ 5 ಮಂದಿ ಪೊಲೀಸರ ವಶಕ್ಕೆ – https://kundapraa.com/?p=68953 .
3 thoughts on “ಬಿಜೆಪಿ ಎಂಎಲ್ಎ ಟಿಕೆಟ್ ಹೆಸರಲ್ಲಿ ವಂಚನೆ: 8 ಮಂದಿ ವಿರುದ್ಧ ಎಫ್ಐಆರ್, ಐವರ ಬಂಧನ”