ಮಳೆಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಹಾಗಾಗಿ ಈ ಸಮಯದಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಗಮನಹರಿಸಿವುದು ಒಳ್ಳೆಯದು. ಮಳೆಗಾಲದಲ್ಲಿ ಯಾವ ಆಹಾರವನ್ನು ಸೇವಿಸಬೇಕು. ಯಾವುದನ್ನು ಸೇವಿಸಬಾರದೆಂಬ ಅರಿವು ಇದ್ದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಸಮಯದಲ್ಲಿ ಏನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ನೋಡೋಣ.
ಹಸಿರು ತರಕಾರಿಗಳು ಹೆಚ್ಚು ಬೇಡ:
ಹಸಿರು ಸೊಪ್ಪುಗಳನ್ನು ವರ್ಷವಿಡೀ ತಿನ್ನಲು ಸಲಹೆ ನೀಡಲಾಗುತ್ತದೆಯಾದರೂ, ಮಳೆಗಾಲದಲ್ಲಿ ಹಾಗೆ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಈ ಋತುವಿನಲ್ಲಿ ತೇವಾಂಶವು ಹೆಚ್ಚಾಗುತ್ತದೆ ಎಂದು ಆಹಾರ ತಜ್ಞರು ನಂಬುತ್ತಾರೆ, ಇನ್ನು ಮಾನ್ಸೂನ್ ತಿಂಗಳಲ್ಲಿ ಕೀಟಾಣುಗಳು ತರಕಾರಿ ಎಲೆಗಳಲ್ಲಿ ನೆಲೆಸಲು ಮತ್ತು ಸಂತಾನೋತ್ಪತ್ತಿ ಮಾಡಲು ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪಾಲಕ್, ಎಲೆಕೋಸು ಮತ್ತು ಹೂಕೋಸು ಮುಂತಾದ ತರಕಾರಿಗಳನ್ನು ತಿನ್ನಬಾರದು.
ನೀರನ್ನು ಕುದಿಸಿ, ಕುಡಿಯುವುದು ಒಳ್ಳೆಯದು:
ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಅಪಾಯ ಹೆಚ್ಚು. ಇಂತಹ ಕಲುಷಿತ ನೀರು ಹೊಟ್ಟೆಯ ಸೋಂಕುಗಳು, ಕಾಲರ, ಅತಿಸಾರ ಮತ್ತು ಟೈಫಾಯಿಡ್ ನಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕುದಿಸಿ ನೀರು ಕುಡಿಯಿರಿ. ಇನ್ನು ತಣ್ಣೀರು ಕುಡಿಯೋದರಿಂದ ಶೀತ, ಕೆಮ್ಮು ಮೊದಲಾದ ವೈರಲ್ ಸಮಸ್ಯೆಗಳು ಸಹ ಉಂಟಾಗುತ್ತವೆ. ಮಳೆಗಾಲದಲ್ಲಿ ತಣ್ಣನೆಯ ವಾತಾವರಣ ಇರೋದರಿಂದ ಈ ಸಮಸ್ಯೆ ಒಮ್ಮೆ ಆರಂಭವಾದರೆ ಮತ್ತೆ ಸುಲಭವಾಗಿ ಗುಣಮುಖರಾಗೋದಿಲ್ಲ.
ಕರಿದ ವಸ್ತು ತಿನ್ನುವುದನ್ನು ತಪ್ಪಿಸಿ:
ಜನರು ಸಾಮಾನ್ಯವಾಗಿ ಮಳೆಗಾಲದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ತಿನ್ನಲು ಇಷ್ಟಪಡುತ್ತಾರೆ ಆದರೆ ಇದು ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಹೆಚ್ಚು ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ಹೊಟ್ಟೆ ಉಬ್ಬರ ಅಥವಾ ಅನಿಲದ ಅಪಾಯವು ಹೆಚ್ಚಾಗುತ್ತದೆ. ಇದರಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗದೇ ಇರಬಹುದು. ವಾಸ್ತವವಾಗಿ, ಮಳೆಗಾಲದಲ್ಲಿ ಚಯಾಪಚಯ ಕ್ರಿಯೆಯು ನಿಧಾನವಾಗುತ್ತದೆ, ಇದರಿಂದ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಜೀರ್ಣಿಸಿಕೊಳ್ಳಲು ಹೊಟ್ಟೆಗೆ ಕಷ್ಟವಾಗುತ್ತದೆ. ಮಾನ್ಸೂನ್ ನಲ್ಲಿ ಸಾಧ್ಯವಾದಷ್ಟು ಹಗುರವಾದ ವಸ್ತುಗಳನ್ನು ತಿನ್ನಿ.
ಕುಂದಾಪ್ರ ಡಾಟ್ ಕಾಂ ಲೇಖನ
ಇದನ್ನೂ ಓದಿ:
► ಮಳೆಗಾಲದಲ್ಲಿ ಈ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಿ – https://kundapraa.com/?p=50349 .
► ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದದ ಟಿಪ್ಸ್ – https://kundapraa.com/?p=49896 .