ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಡಿ.22ರಂದು ತಾಲೂಕಿನ 15 ಗ್ರಾಮ ಪಂಚಾಯತಿಗಳಿಗೆ ನಡೆಯಲಿರುವ ಚುನಾವಣೆಗೆ ಸರ್ವ ಸಿದ್ಧತೆಗಳ ನಡೆದಿದ್ದು, 128 ಮತಗಟ್ಟೆಗಳಲ್ಲಿ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಸೋಮವಾರ ಮಸ್ಟರಿಂಗ್ ಕಾರ್ಯ ನಡೆದಿದೆ.
ಮಂಗಳವಾರ ನಡೆಯಲಿರುವ ಮತದಾನ ಪ್ರಕ್ರಿಯೆಗೆ 616 ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 128 ಡಿ ಗ್ರೂಫ್ ನೌಕರರು ಇರಲಿದ್ದು ಕೊರೋನಾ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೊರೊನಾ ಸುರಕ್ಷಿತ ಕಿಟ್ಗಳನ್ನು ಚುನಾವಣಾ ಆಯೋಗ ಸರಬರಾಜು ಮಾಡಿದೆ. ಸರತಿ ಸಾಲಿನಲ್ಲಿ ಅಂತರ ಕಾಯ್ದುಕೊಂಡು ಮತ ಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ಪರೀಕ್ಷಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಅಧಿಕಾರಿಗಳು ಮಸ್ಟರಿಂಗ್ ಮುಗಿಸಿ ಮತಗಟ್ಟೆಗಳಿಗೆ ತೆರಳಲು ಒಟ್ಟು 33 ಸರಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
88,659 ಮತದಾರರು:
ಬೈಂದೂರು ತಾಲೂಕಿನಲ್ಲಿ ಒಟ್ಟು 128 ಮತಗಟ್ಟೆಗಳಿದ್ದು 88,659 ಮತದಾರರಿದ್ದಾರೆ. ಅವರಲ್ಲಿ 45,284 ಮಹಿಳಾ ಮತದಾರರು, 43,374 ಪುರುಷ ಮತದಾರರು ಹಾಗೂ ಒಬ್ಬರು ಇತರ ಮತದಾರರಿದ್ದಾರೆ. 14 ಸೂಕ್ಷ್ಮ, 11 ಅತಿ ಸೂಕ್ಷ್ಮ ಮತಗಟ್ಟೆಗಳು ಸೇರಿ ಉಳಿದವು ಸಾಮಾನ್ಯ ಮತಗಟ್ಟೆಗಳಾಗಿದೆ.
ಎರಡು ಕಡೆ ತ್ರಿಕೋನ ಸ್ಪರ್ಧೆ
ಚುನಾವಣೆ ನಡೆಯುವ 15 ಗ್ರಾಮ ಪಂಚಾಯಿತಿಗಳಲ್ಲಿ ಎರಡರಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ. ನಾಡ ಗ್ರಾಮ ಪಂಚಾಯಿತಿಯ ಎಲ್ಲ 19 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಬೆಜೆಪಿ ಬೆಂಬಲಿತರು ಸ್ಪರ್ಧಿಸುತ್ತಿದ್ದಾರೆ. 15 ಸ್ಥಾನಗಳಲ್ಲಿ ಸಿಪಿಎಂ ಬೆಂಬಲಿತರು ಸ್ಪರ್ಧೆ ನೀಡಲು ಅಣಿಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ಈ ಪಕ್ಷದ ಬೆಂಬಲದಿಂದ ಗೆದ್ದ 4 ಸದಸ್ಯರು ಇದ್ದರು. ಒಂದು ಅವಧಿಯಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ಸಿಪಿಎಂ ಬೆಂಬಲಿತರು ಈ ಬಾರಿ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿರುವುದರಿಂದ ಮೂರು ಪಕ್ಷಗಳ ಬೆಂಬಲಿತರ ನಡುವೆ ತೀವ್ರ ಹಣಾಹಣಿ ನಡೆಯುವುದು ಖಚಿತವಾಗಿದೆ.
ಮರವಂತೆ ಗ್ರಾಮ ಪಂಚಾಯಿತಿಯ 14 ಸ್ಥಾನಗಳಲ್ಲಿ ಒಂದು ಅವಿರೋಧವಾಗಿ ಆಯ್ಕೆಯಾಗಿದೆ. ಉಳಿದ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ಜತೆಗೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸ್ವಾಭಿಮಾನಿ ಪಕ್ಷೇತರ ವೇದಿಕೆ ಹೆಸರಿನಲ್ಲಿ 12 ಸ್ಥಾನಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಆ ಮೂಲಕ ಇಲ್ಲಿಯೂ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಬಂದೋವಸ್ತ್:
ಕುಂದಾಪುರ ಪ್ರಭಾರ ಡಿವೈಎಸ್ಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಕುಂದಾಪುರದ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಬೈಂದೂರು ಠಾಣೆ ಪಿಎಸ್ಐ ಸಂಗೀತಾ, ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್, ಕೊಲ್ಲೂರು ಪಿಎಸ್ಐ ಮಹಾದೇವ ಬೋಸ್ಲೆ, ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್, ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಸುಧಾಪ್ರಭು, ಸಂಚಾರಿ ಠಾಣೆ ಉಪನಿರೀಕ್ಷಕರಾದ ಸುಬ್ಬಣ್ಣ, ಸುದರ್ಶನ್ ಸೇರಿದಂತೆ 269 ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜಿಸಲಾಗಿದೆ. ಇವರಲ್ಲಿ 100 ಮಂದಿ ಟ್ರೈನಿ ಪೊಲೀಸ್ ಸಿಬ್ಬಂದಿಗಳಿದ್ದಾರೆ. 1 ಕೆ.ಎಸ್.ಆರ್.ಪಿ ಹಾಗೂ 1 ಫ್ಲಟೂನ್ ನಿಯೋಜಿಸಲಾಗಿದೆ.