ಕುಂದಾಪ್ರ ಡಾಟ್ ಕಾಂ
ಕುಂದಾಪುರ: ಕುಂದಾಪುರ ತಾಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಎಚ್.ಇಂದಿರಾ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
37 ಸದಸ್ಯ ಬಲವಿದ್ದ ಕುಂದಾಪುರ ತಾಲ್ಲೂಕು ಪಂಚಾಯಿತಿ, ನೂತನವಾಗಿ ಬೈಂದೂರು ತಾಲ್ಲೂಕು ರಚನೆಯಾದ ಬಳಿಕ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕು ಪಂಚಾಯಿತಿಯಾಗಿ ಬೇರೆ ಬೇರೆಯಾಗಿತ್ತು. 14 ಸದಸ್ಯರು ಬೈಂದೂರು ತಾಲ್ಲೂಕು ಪಂಚಾಯಿತಿಯಲ್ಲಿ ಹಿಂದೆ ಅವಿಭಜಿತ ಕುಂದಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಶ್ಯಾಮಲಾ ಕುಂದರ್ ಅವರು ಸೇರಿದ್ದರಿಂದಾಗಿ ಕುಂದಾಪುರ ತಾಲ್ಲೂಕು ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆದಿತ್ತು. ಉಪಾಧ್ಯಕ್ಷರಾಗಿ ರಾಮ್ಕಿಶನ್ ಹೆಗ್ಡೆ ಮುಂದುವರೆದಿದ್ದಾರೆ.
ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು ಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆಯನ್ನು ಪೂರೈಸಿ, ನೂತನ ಅಧ್ಯಕ್ಷರಿಗೆ ಪುಷ್ಟ ಗುಚ್ಛವನ್ನು ನೀಡಿ ಅಭಿನಂದನೆ ಸಲ್ಲಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್ ಇದ್ದರು.
ಅಂಗನವಾಡಿ ಶಿಕ್ಷಕಿಯಾಗಿದ್ದ ಇಂದಿರಾ ಶೆಟ್ಟಿ ಹರ್ಕೂರು ಹುದ್ದೆ ರಾಜಿನಾಮೆ ನೀಡಿ ರಾಜಕೀಯ ಕ್ಷೇತ್ರವನ್ನು ಪ್ರತಿನಿಧಿಸಿ ವಂಡ್ಸೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿದ್ದರು. ವಂಡ್ಸೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೀಸಲಾತಿ ಬದಲಾವಣೆಯಾಗಿದ್ದರಿಂದ ಅವರು ಆಲೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಬೆಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲ ಶಂಕರ್ ಅಂಕದಕಟ್ಟೆ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಪೈ, ಬಿಜೆಪಿ ಪಕ್ಷದ ಪ್ರಮುಖರಾದ ಮೋಹನ್ದಾಸ್ ಶೆಣೈ, ಸದಾನಂದ ಉಪ್ಪಿನಕುದ್ರು, ಕಾಡೂರು ಸುರೇಶ್ ಶೆಟ್ಟಿ, ಸದಾನಂದ ಬಳ್ಕೂರು, ಸಂತೋಷ್ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ ಇದ್ದರು.
ಇದನ್ನೂ ಓದಿ:
► ಬೈಂದೂರು ತಾಲೂಕು ಪಂಚಾಯತ್:ಅಧ್ಯಕ್ಷರಾಗಿ ಮಹೇಂದ್ರ ಪೂಜಾರಿ, ಉಪಾಧ್ಯಕ್ಷರಾಗಿ ಮಾಲಿನಿ ಕೆ. ಆಯ್ಕೆ – https://kundapraa.com/?p=40236 .