ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೌಲ್ಯಗಳು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಶಿಥಿಲವಾಗಿದೆ. ಹಣ, ಅಧಿಕಾರ ಹಾಗೂ ಪ್ರಚಾರದ ಆಧಾರದಲ್ಲಿಯೇ ಅದನ್ನು ಅಳೆಯಲಾಗುತ್ತಿದೆ. ಎಲ್ಲವನ್ನೂ ಕೈಯಂಚಲ್ಲಿ ಪಡೆಯುವಷ್ಟು ಸಲೀಸಾಗಿ ಮುಂದುವರಿದಿರುವ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಮರುಸ್ಥಾಪನೆಯಾಗಬೇಕಿದೆ ಎಂದು ಸಾಹಿತಿ, ಚಿಂತಕ ವಿವೇಕಾನಂದ ಹೆಚ್. ಕೆ ಹೇಳಿದರು.
ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯು ಮಂಗಳವಾರ ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡಿರುವ ವಿವೇಕಾನಂದ ಹೆಚ್. ಕೆ ಅವರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿ ಕೆಟ್ಟವರು, ವಂಚಕರು ಈ ಸಮಾದಲ್ಲಿ ವಿಜ್ರಂಭಿಸುತ್ತಾರೆ ಎಂಬ ಭಾವನೆ ಇದೆ. ಕೆಲವು ವರ್ಷಗಳ ಹಿಂದೆ ಒಳ್ಳೆಯವರಿಗೆ ಸಮಾಜದಲ್ಲಿ ಗೌರವವಿತ್ತು. ಇಂದೂ ಅಂತಹ ಒಳ್ಳೆಯತನಕ್ಕೆ ಗೌರವಕೊಡುವ ಕಾರ್ಯವಾಗಬೇಕಿದೆ. ಮನ, ಮನೆ ಹಾಗೂ ಮತಗಳಲ್ಲಿ ಬದಲಾವಣೆಯಾದರೆ ಮುಂದಿನ ಹದಿನೈದು ವರ್ಷಗಳಲ್ಲಿ ಮೌಲ್ಯಗಳ ಮರುಸ್ಥಾಪನೆ ಮಾಡಬಹುದಾಗಿದೆ. ಯಾವುದೇ ಕ್ಷೇತ್ರದ ಕೆಟ್ಟ ವ್ಯಕ್ತಿಗಳನ್ನು ನಿರ್ಲಕ್ಷಿಸಿ ಒಳ್ಳೆಯವರನ್ನು ಗೌರವಿಸುವ ಕಾರ್ಯ ನಮ್ಮಿಂದ ಆರಂಭವಾದರೆ ಮುಂದಿನ ಪೀಳಿಗೆಯಾದರೂ ನೆಮ್ಮದಿಯಿಂದ ಬದುಕಬಹುದು ಎಂದರು.
ಮೌಲ್ಯಗಳ ಉದ್ದೀಪನಕ್ಕಾಗಿ ಪಾದಯಾತ್ರೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಾದ ವಿವೇಕಾನಂದ ಹೆಚ್. ಕೆ ಅವರು ವೃತ್ತಿಯಲ್ಲಿ ಜಾಹೀರಾತು ನಿರ್ಮಾಪಕರು. ಮಾನವೀಯ ಮೌಲ್ಯಗಳ ಉದ್ದೀಪನ ಹಾಗೂ ಸಮಾಜವನ್ನು ಹತ್ತಿರದಿಂದ ಅರಿಯುವ ಸಲುವಾಗಿ ಅವರು ಕರ್ನಾಟಕದಾದ್ಯಂತ ಪಾದಯಾತ್ರೆ ಕೈಗೊಂಡಿದ್ದಾರೆ. ಕುಂದಾಪುರಕ್ಕೆ ಪ್ರವೇಶಿಸುವ ಮೊದಲು 269ನೇ ದಿನದ ಪಾದಯಾತ್ರೆ ಪೂರೈಸಿದ್ದು ಈವರೆಗೆ 8200 ಕಿ.ಮೀ ಕ್ರಮಿಸಿದ್ದಾರೆ.
ಹಿರಿಯ ಸಾಹಿತಿ ಎಎಸ್ಎನ್ ಹೆಬ್ಬಾರ್, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಪುರಸಭಾ ಸದಸ್ಯ ಗಿರೀಶ್ ದೇವಾಡಿಗ, ಜೋಯ್ ಜೆ. ಕರ್ವಾಲೋ ಮೊದಲಾದವರು ಉಪಸ್ಥಿತರಿದ್ದರು.



ಇದನ್ನೂ ಓದಿ:
► ಸಿದ್ಧಾಪುರ: ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡ ಹೆಚ್. ಕೆ. ವಿವೇಕಾನಂದ ಅವರಿಗೆ ಸನ್ಮಾನ – https://kundapraa.com/?p=50409 .
► ಪ್ರಬುದ್ಧ ಮನಸು ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ನಾಂದಿ: ವಿವೇಕಾನಂದ ಹೆಚ್.ಕೆ. – https://kundapraa.com/?p=50506 .