ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತೀಯರು ಧಾರ್ಮಿಕತೆ ಹಾಗೂ ದೇಶಭಕ್ತಿಯ ವಿಷಯಕ್ಕೆ ಸಂಘಟಿತರಾಗುತ್ತಾರೆ. ವೈಯಕ್ತಿಕ ಲಾಭ, ಮನಸ್ತಾಪಗಳಿಂದಾಗಿ ವೈಮನಸ್ಸುಗಳಿದ್ದರೂ ದೇಶ, ಧರ್ಮಕ್ಕೆ ಕಳಂಕ ಉಂಟಾದರೇ ಒಗ್ಗಟ್ಟಾಗಿ ಪ್ರತಿಭಟಿಸುವ ಗುಣ ನಮ್ಮಲ್ಲಿದೆ. ಇಂತಹ ಮನೋಭಾವ ಗಟ್ಟಿಯಾಗಬೇಕಾದರೇ ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ ಒಗ್ಗಟ್ಟಾಗಿ ಮುನ್ನಡೆಯುವ ಮಾರ್ಗ ತೋರಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವದ ದೇವಳದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಿದ ೧೨ನೇ ವಾರ್ಷಿಕೋತ್ಸವ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಲ್ಲಿಸಿ ಶುಭಶಂಸನೆಗೈದರು.
ಮಕ್ಕಳು ಸನ್ಮಾರ್ಗದಲ್ಲಿ ನಡೆಯಬೇಕಿದ್ದರೆ ಅವರಿಗೆ ಸಂಸ್ಕಾರ ಸಂಸ್ಕೃತಿಯ ಅರಿವಿರಬೇಕು. ಇದನ್ನು ಯಾವ ಶಿಕ್ಷಣ ಕೇಂದ್ರದಲ್ಲಿಯೂ ಹೇಳಿಕೊಡಲಾರಾರರು. ಇದೇ ಪ್ರಸ್ತುತ ಗೊಂದಲಕ್ಕೆ ಕಾರಣವಾಗಿದೆ. ನಮ್ಮ ದೇಶ ಶತಮಾನಗಳ ಕಾಲ ಪರಕೀಯರ ದಾಳಿಗೆ ತುತ್ತಾದರೂ ತನ್ನತನವನ್ನು ಉಳಿಸಿಕೊಂಡಿದೆ. ಸನಾತನ ಸಂಸ್ಕೃತಿಯಿಂದಾಗಿ ದೇಶ ವಿಶ್ವಮಾನ್ಯವಾಗಿ ಉಳಿದಿದ್ದು, ಧರ್ಮ ದೇಶದ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಹೇಳುವ ಅಗತ್ಯವಿದೆ ಎಂದರು.
ಯುವಕ ಮಂಡಲಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ ಎಂಬುದಕ್ಕೆ ಕಳವಾಡಿಯ ಶ್ರೀ ಮಾರಿಕಾಂಬ ಯುತ್ ಕ್ಲಬ್ ಉತ್ತಮ ನಿದರ್ಶನ. ಯುವಕರಲ್ಲಿನ ಸಂಘಟನಾ ಮನೋಭಾವ ಅದ್ಬುತ ಕಾರ್ಯಸಿದ್ಧಿಗೆ ಸಹಕಾರಿಯಾಗಬಲ್ಲದು ಎಂದರು.
ಕಳವಾಡಿ ಶ್ರೀ ಮಾರಿಕಾಂಬ ಯೂತ್ ಕ್ಲಬ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ರೋಟರಿ ಗವರ್ನರ್ ಜಗನ್ನಾಥ ಶೆಟ್ಟಿ ವಿಶಿಷ್ಟವಾಗಿ ಮೂಡಿಬಂದ ಭೂತದ ಕೋಲ ಪ್ರತಿಕೃತಿಗೆ ಖಡ್ಗ ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೈಂದೂರು ಸೀನಿಯರ್ ಸಿಟಿಜನ್ ಅಸೋಸಿಯೇಶನ್ ಅಧ್ಯಕ್ಷ ವಸಂತ ಹೆಗ್ಡೆ, ದಾಸ ಸಂಕೀರ್ತನಕಾರ ಕಾಸರಗೋಡು ರಾಮಕೃಷ್ಣ ಕಾಟುಕುಕ್ಕೆ, ವೇದಮೂರ್ತಿ ರಾಮಚಂದ್ರ ಅನಂತ ಭಟ್, ಉದ್ಯಮಿ ಕಿರುಕಿ ಬಾಬು ಪೂಜಾರಿ, ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ, ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೃಷ್ಣಯ್ಯ ಶೇರುಗಾರ್, ಕುಂದಗನ್ನಡ ಸಿನೆಮಾ ನಟ ಓಂಗುರು ಬಸ್ರೂರು ಮೊದಲಾದವರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಇದೇ ಸಂದರ್ಭದಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದ ಶಬರೀಶ, ಶಿವಕುಮಾರ್ ಹಾಗೂ ಅಶ್ವಿನಿ ಅವರನ್ನು ಗೌರವಿಸಲಾಯಿತು. ಚಿತ್ರ ಕಲಾವಿದ ಸುದರ್ಶನ ಆಚಾರ್ಯ ಹಾಗೂ ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಅನ್ನಸಂತರ್ಪಣೆಯ ಸೇವಾಕರ್ತರಾದ ಕಿರುಕಿ ಬಾಬು ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು.
ಶ್ರೀ ಮಾರಿಕಾಂಬ ಯೂತ್ ಕ್ಲಬ್ ಸದಸ್ಯ ಬಾಲರಾಜ ಕಳವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಕಳವಾಡಿ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.