ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.09: ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರಗಳಲ್ಲಿ ಒಂದಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಕ್ಷೇತ್ರದಲ್ಲಿ ಚಂಪಾಷಷ್ಠಿ ಅಂಗವಾಗಿ ಗುರುವಾರ ದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆದರೇ, ಬೆಳಿಗ್ಗೆಯಿಂದಲೇ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು, ತಮ್ಮ ಹರಕೆಗಳನ್ನು ಸಲ್ಲಿಸಿ ಪುನೀತರಾದರು.
ಮೊದಲನೇ ದಿನ ಮುಂಜಾನೆ ನಾಲ್ಕು ಗಂಟೆಗೆ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ, ಹಣ್ಣುಕಾಯಿ, ಕಲಸ ಸಮರ್ಪಣೆ, ದೇವರ ದರ್ಶನ, ತೀರ್ಥ ಪ್ರಸಾದ ವಿತರಣೆ, ವೇದ ಪಾರಾಯಣ, ಮಡೆ ಪ್ರದಕ್ಷಿಣೆ, ಕಲಶಾಭಿಷೇಕ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಯಿತು. ಮಧ್ಯಹ್ನದ ವೇಳೆ ದೇವಳದ ನಾಗರಹಾವು ದರ್ಶನ ನೀಡಿರುವುದು ಭಕ್ತರನ್ನು ಇನ್ನಷ್ಟು ಪುಳಕಗೊಳಿಸಿತು. ಮೊದಲ ದಿನ ಅಂದಾಜು ಹತ್ತು ಸಾವಿರ ಮಂದಿ ದೇವರ ದರ್ಶನ ಪಡೆದು ಹೂಕಾಯಿ ಹರಕೆ ಸಮರ್ಪಿಸಿದರು. ಮೂರು ಸಾವಿರ ಮಂದಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.
ವಿವಾಹ, ಸಂತಾನ, ರೋಗ ಸಂಬಂಧಿತ ಸಮಸ್ಯೆ ಎದುರಾದ ಸಂದರ್ಭದಲ್ಲಿ ಶ್ರೀ ದೇವರಲ್ಲಿ ಹರಕೆ ಹೊತ್ತುಕೊಂಡವರು ಷಷ್ಟಿಯ ದಿನ ದೇವಳಕ್ಕೆ ಬಂದು ಹರಕೆ ತೀರಿಸುವುದು ವಾಡಿಕೆಯಾಗಿದ್ದು ಅದರಂತೆ ಹಲವು ಮಂದಿ ಹರಕೆ ತೀರಿಸಿದರು. ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸಿದರು. ಸಿಂಗಾರ ಪುಷ್ಪ ಪ್ರೀಯವಾದ ದೇವರಿಗೆ ಸಿಂಗಾರ ಅರ್ಪಿಸುವುದು ಕಂಡುಬಂತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಹೆಗ್ಡೆ, ಸಮಿತಿ ಸದಸ್ಯರಾದ ಅರ್ಚಕ ಸತ್ಯನಾರಾಯಣ ಪುರಾಣಿಕ, ಭರತ್ ಕುಮಾರ್ ಶೆಟ್ಟಿ, ಚಂದ್ರ ಪೂಜಾರಿ ಕಾಳಾವರ, ಮಹೇಶ್ ಕಾಳಾವರ, ಲತಾ ಎಸ್. ಕಾಳಾವರ, ಲಲಿತಾ ಸಳ್ವಾಡಿ, ಕೆ. ರಂಜಿತ್ ಕುಮಾರ್ ಶೆಟ್ಟಿ, ಅಶೋಕ್ ಶೆಟ್ಟಿ ಕಾಳಾವರ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ರವಿರಾಜ್ ಎನ್. ಶೆಟ್ಟಿ, ಅರ್ಚಕರು, ತಂತ್ರಿಗಳು, ಊರ ಪ್ರಮುಖರಾದ ಕೃಷ್ಣದೇವ ಕಾರಂತ್, ಬಾಲಚಂದ್ರ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಡಿ.10 ರಂದು ಬೆಳಿಗ್ಗೆ ಹಾಲಿಟ್ಟು ಸೇವೆ, ಕಟ್ಟುಕಟ್ಟಳೆ ಸೇವೆ, ನಾಗ ಮಂಡಲೋತ್ಸವ, ಮಧ್ಯಾಹ್ನ ಶ್ರೀ ಕ್ಷೇತ್ರ ಪ್ರದಕ್ಷಿಣೆ, ಕ್ಷೇತ್ರಪಾಲನಿಗೆ ಪೂಜೆ, ಶ್ರೀ ಭೂತರಾಯ ಸ್ವಾಮಿಗೆ ತೆಂಗಿನಕಾಯಿ ಸೇವೆ, ಸಂದರ್ಶನ, ರಾತ್ರಿ 7ರಿಂದ ಹಾಲಾಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಜರುಗಲಿದೆ.
