ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ.17: ಸಮುದ್ರದಲೆಗಳ ಹೊಡೆತಕ್ಕೆ ಸಿಲುಗಿ ಮುಗುಚಿ ಬಿದ್ದಿದ್ದ ದೋಣಿಯಲ್ಲಿ ನಾಪತ್ತೆಯಾಗಿದ್ದ ಓರ್ವ ವ್ಯಕ್ತಿಯ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಕಿರಿಮಂಜೇಶ್ವರ ಹೊಸಹಕ್ಲು ಬಳಿ ಶವ ಪತ್ತೆಯಾಗಿದ್ದು, ಮೃತರನ್ನು ನಾಗ ಖಾರ್ವಿ ಎಂದು ಗುರುತಿಸಲಾಗಿದೆ.
ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ಅ.16 ಮಧ್ಯಾಹ್ನ ನಡೆದ ದೋಣಿ ಅವಘಡದಲ್ಲಿ ಎಂಟು ಮಂದಿ ಈಜಿ ಬಚಾವಾಗಿದ್ದರು. ಬಿ. ನಾಗ, ಲಕ್ಷಣ, ಶೇಖರ ಜಿ., ಮಂಜುನಾಥ ಖಾರ್ವಿ ಸೇರಿ ಒಟ್ಟು ನಾಲ್ವರು ವ್ಯಕ್ತಿಗಳು ನಾಪತ್ತೆಯಾಗಿದ್ದರು. ದೋಣಿಯಲ್ಲಿದ್ದ ಬಲೆ ಸಿಲುಕಿಕೊಂಡಿದ್ದರಿಂದ ಅವರು ಮೇಲೆ ಬರಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತಿದೆ. ಅವರಿಗಾಗಿ ರಾತ್ರಿ 8 ಗಂಟೆಯ ತನಕ ಶೋಧ ಕಾರ್ಯ ಮುಂದುವರಿದಿತ್ತು. ಇಂದು ಬೆಳಿಗ್ಗೆ ನಾಗ ಖಾರ್ವಿ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿಯೇ ಇಬ್ಬರ ಮೃತದೇಹ ಪತ್ತೆಯಾಗುವ ಸಾಧ್ಯತೆ ಇದ್ದು, ಅಲ್ಲಿಯೇ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕೊಡೇರಿಯ ಸಾಗರಶ್ರೀ ಎಂಬ ಹೆಸರಿನ ದೋಣಿ ಮೀನುಗಾರಿಕೆ ಮುಗಿಸಿ ಇಂದು ಮಧ್ಯಾಹ್ನ ಹಿಂದಿರುಗುತ್ತಿದ್ದ ಸಂದರ್ಭ ವಿಪರೀತ ಗಾಳಿ, ಸಮುದ್ರದ ಅಲೆಗಳ ರಭಸಕ್ಕೆ ಬಂದರು ಪ್ರವೇಶಿಸುವ ಸಂದರ್ಭ ಪಕ್ಕದ ದೋಣಿಗೆ ಬಡಿದು ಬಳಿಕ ಬ್ರೇಕ್ ವಾಟರ್ ತಡೆಗೋಡೆಗೆ ಬಡಿದು ಮಗುಚಿ ಬಿದ್ದಿದೆ. ದೋಣಿಯಲ್ಲಿ 12 ಮಂದಿ ಮೀನುಗಾರರಿದ್ದರು. ಎಂಟು ಮಂದಿ ಈಜಿ ಪಾರಾಗಿದ್ದರೇ, ಮೂವರಿಗೆ ಬಲೆ ಸಿಲುಕಿಕೊಂಡಿದ್ದರಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ನಾಗ ಎನ್ನುವವರಿಗೆ ಈಜು ಬರುತ್ತಿರಲಿಲ್ಲ ಎಂದು ಘಟನಾ ಸ್ಥಳದಲ್ಲಿರುವವರು ವಿವರಿಸಿದ್ದಾರೆ.
ಇದನ್ನೂ ಓದಿ:
► ಕೊಡೇರಿ ದೋಣಿ ದುರಂತ: ನಾಪತ್ತೆಯಾದ ನಾಲ್ವರಿಗಾಗಿ ಮುಂದುವರಿದ ಶೋಧ ಕಾರ್ಯ – https://kundapraa.com/?p=40362 .