ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಮಂಗಳವಾರ ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸಿದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ ಸುತ್ತು ಹೊಡೆಯುತ್ತಿರುವಂತೆಯೇ ರೋಮಾಂಚನಗೊಂಡರು. ನವ ವಧುವರರು ವಾಡಿಕೆಯಂತೆ ಹಬ್ಬಕ್ಕೆ ಬಂದು ಕೊಡಿ(ಕಬ್ಬು) ಕೊಂಡು ದೇವರಿಗೆ ಪೂಜೆ ಸಲ್ಲಿಸಿದರು. ಕೊಡಿಹಬ್ಬದ ಅಂಗವಾಗಿ ನಗರದ ಬೀದಿಗಳು ಸಿಂಗಾರಗೊಂಡಿದ್ದು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದಲ್ಲಿ ದೇವಳಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಸಲುವಾಗಿ ಕುಂದಾಪುರ ಡಿ.ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಉತ್ಸವದ ಸಂದರ್ಭದಲ್ಲಿ ಅಲೆವೂರು ಶ್ರೀ ವಿಷ್ಣುಮೂರ್ತಿ ಸೇವಾ ಬಳಗದಿಂದ ತಾಂಡವ ನೃತ್ಯ ಜರುಗಿತು. ರಥೋತ್ಸವದಂದು ಸಾರ್ವಜನಿಕರಿಗೆ ಕೆ.ವಿ. ಆನಂದರಾವ್ ಹಾಗೂ ಮಕ್ಕಳಿಂದ ಉಚಿತ ಪಾನಕದ ವ್ಯವಸ್ಥೆ, ಹಿಂದೂ ಜಾಗರಣ ವೇದಿಕೆ ಕೋಟೇಶ್ವರದಿಂದ ಉಚಿತ ಮಜ್ಜಿಗೆ ವಿತರಣೆ ಮಾಡಲಾಗಿತ್ತು. ಜಿ. ವಿ ಆರ್ಟ್ ಹೌಸ್ ಐಪೆಲ್ ಟವರ್ ಪ್ರತಿಕೃತಿ, ಗಂಗಾ ಆರ್ಟ್ಸ್ ಅವರ ಶ್ರೀಕೃಷ್ಣ ಹಾಗೂ ಗೋವಿನ ಪ್ರತಿಕೃತಿ ಸುಂದರವಾಗಿ ನಿರ್ಮಿಸಲಾಗಿತ್ತು. ಹಬ್ಬದ ತುಂಬಾ ಸೆಲ್ಫಿ ಕ್ರೇಜ್ ಹೆಚ್ಚಿದ್ದವು.
ಹೆಲಿಕ್ಯಾಮ್ ಚಿತ್ರಗಳು: ಡಿಜೆ ರಂಜು ಕುಂದಾಪುರ | ಇತರೆ: ಸುನಿಲ್ ಬೈಂದೂರು