ಕೊಲ್ಲೂರು: ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸನ್ನಿಧಿಯಲ್ಲಿ ಅ. 1ರಿಂದ ಅ. 11ರವರೆಗೆ ನವರಾತ್ರಿ ಉತ್ಸವ ವೈಭವದಿಂದ ಜರುಗುವ ನವರಾತ್ರಿ ಉತ್ಸವಕ್ಕೆ ದಿನವೂ ಸಾವಿರಾರು ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ.
ಅ.01ರಿಂದಲೇ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ವಿವಿಧ ಪೂಜೆ, ಹೋಮ-ಹವನಗಳು ನಡೆಯುತ್ತಿದ್ದು, ಅ. 10ರಂದು ಬೆಳಿಗ್ಗೆ ಚಂಡಿಕಾಹೋಮ, ರಾತ್ರಿ ರಥೋತ್ಸವ ಹಾಗೂ ಅ. 11ರ ವಿಜಯದಶಮಿಯಂದು ವಿದ್ಯಾರಂಭ, ನವಾನ್ನಪ್ರಾಶನ ನಡೆಯಲಿದೆ. ವಿದ್ಯಾರಂಭಕ್ಕೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಮಕ್ಕಳನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಮಕ್ಕಳ ನಾಲಿಗೆಯ ಮೇಲೆ ಓಂಕಾರವನ್ನು ಬರೆಸಲಿದ್ದಾರೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ದೇಗುಲಕ್ಕೆ ಆಗಮಿಸುವ ಭಕ್ತರ ಅನುಕೂಲತೆ, ವಾಸ್ತವ್ಯಕ್ಕೆ ಸಕಲ ಸೌಕರ್ಯ ಒದಗಿಸಲಾಗಿದ್ದು, ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ ಎಂದು ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಿ. ಪ್ರಸನ್ನ ಅವರು ತಿಳಿಸಿದ್ದಾರೆ.