ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಚಿನ್ನಕ್ಕಿಂತ ಅನ್ನ ಶ್ರೇಷ್ಠ, ಅನ್ನಕ್ಕಿಂತ ಮಣ್ಣು ಶ್ರೇಷ್ಠ ಎನ್ನುವುದು ನಮ್ಮ ಹಿರಿಯರ ಅನುಭವದ ಮಾತು. ಮಣ್ಣಿನಲ್ಲಿ ಅನ್ನ ಬೆಳೆಯುವ ರೈತ ಎಲ್ಲರಿಗಿಂತ ಶ್ರೇಷ್ಠ. ರೈತರು ಮಣ್ಣಿನ ಫಲವತ್ತತೆ ಉಳಿಸಿಕೊಳ್ಳಬೇಕಾದರೆ ಸಾವಯವ ಗೊಬ್ಬರ ತಯಾರಿಗೆ ಅಗತ್ಯವಾದ ಹೈನುಗಾರಿಕೆ ಕೂಡ ನಡೆಸಬೇಕು ಎಂದು ದಕ್ಷಿಣ ಕನ್ನಡ-ಉಡುಪಿ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು.
ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಮತ್ತು ರೈತಸಿರಿ, ರೈತಸೇವಾ ಒಕ್ಕೂಟದ ಆಶ್ರಯದಲ್ಲಿ ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಗುರುವಾರ ನಡೆದ ರೈತರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸಂಕಷ್ಟದ ಕಾಲದಲ್ಲಿ ಎಲ್ಲ ಉತ್ಪಾದಕ ವೃತ್ತಿಗಳಂತೆ ರೈತರೂ ತಮ್ಮ ವೃತ್ತಿಯಿಂದ ಬಿಡುವು ಪಡೆದಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಊಹಿಸುವುದೂ ಅಸಾಧ್ಯ. ಆದರೆ ಸಮುದಾಯ, ಸರ್ಕಾರ ರೈತರನ್ನು ಅವರ ಘನತೆಗೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರು ವಿಷಾದಿಸಿದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸಂಘದ ಲಾಭಾಂಶದಲ್ಲಿ ಈ ಬಾರಿ ರೂ.19.9 ಲಕ್ಷವನ್ನು ರೈತ ಸದಸ್ಯರ ಹಾಗೂ ಸಮಾಜದ ಅನ್ಯ ವಿಶಿಷ್ಟ ವಿಭಾಗಗಳ ಮೇಲ್ಮೆಗೆ ಬಳಸಲಾಗುತ್ತಿದೆ ಎಂದರು.

ರೈತರ ದಿನಾಚರಣೆಯ ಅಂಗವಾಗಿ ನಡೆದ ಸಂಘದ ಹಿರಿಯ ರೈತ ಸದಸ್ಯ ನಾಗೂರು ನರಸಿಂಹ ಶೆಟ್ಟಿ, ಕಳೆದ ಸಾಲಿನಲ್ಲಿ ನಿವೃತ್ತರಾದ ವ್ಯಾಪ್ತಿಯ ಸರ್ಕಾರಿ ಹಾಗೂ ಸಹಕಾರಿ ಉದ್ಯೋಗಿಗಳ ಮತ್ತು ಹನ್ನೊಂದು ಹಾಲು ಉತ್ಪಾಕರ ಸಹಕಾರಿ ಸಂಘಗಳಲ್ಲಿ ಅತ್ಯಧಿಕ ಹಾಲು ಪೂರೈಸಿದವರಿಗೆ ಸನ್ಮಾನ, ಸ್ವಂತ ಕಟ್ಟಡ ನಿರ್ಮಿಸುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೂ.1 ಲಕ್ಷ ಸಹಾಯಧನ ವಿತರಣೆ, 22 ಸರ್ಕಾರಿ ಶಾಲೆಗಳ ಗೌರವ ಶಿಕ್ಷಕರಿಗೆ ತಲಾ ರೂ.20,000 ಗೌರವಧನ ಹಸ್ತಾಂತರ, ಸಾಧನೆಗಾಗಿ ಪ್ರಶಸ್ತಿಗಳಿಸಿದವರಿಗೆ ‘ರೈತಸಿರಿ’ ಗೌರವಾರ್ಪಣೆ, ಎಸ್ಸೆಸ್ಸೆಲ್ಸಿ ಸಾಧಕರಿಗೆ ನಗದು ಪುರಸ್ಕಾರ, ಸಂಘದ ನೂತನ ರೈತಕೂಟಗಳಿಗೆ ರೂ.10,000 ವಾರ್ಷಿಕ ಅನುದಾನ ವಿತರಣೆ, ಸಂಘದ ದಿನದರ್ಶಿಕೆ ಬಿಡುಗಡೆ, ಕೊನೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಎಲ್ಲರ ಗಮನ ಸೆಳೆದು ಶ್ಲಾಘನೆ ಪಡೆಯಿತು.
ಉಭಯ ಜಿಲ್ಲೆಗಳ ಹಾಪ್ಕಾಮ್ಸ್ ಅಧ್ಯಕ್ಷ ಹಾಲಾಡಿ ಸೀತಾರಾಮ ಗಾಣಿಗ, ಗ್ರಾಪಂ ಅಧ್ಯಕ್ಷೆ ಗೀತಾ, ಸಂಘದ ನಿರ್ದೇಶಕರು ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿದರು, ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ವಂದಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.