ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ನ್ಯಾಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಮತ್ತು ವಕೀಲರ ಸಂಘದ ಕಟ್ಟಡದ ಉದ್ಘಾಟನೆಯನ್ನು ಶನಿವಾರ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನೆರವೇರಿಸಿದರು.
ಬಳಿಕ ಅವರು ಮಾತನಾಡಿ ಸಮಸ್ಯೆ ಕಾಣಿಸಿಕೊಂಡಾಗ ಪರಿಹಾರವನ್ನು ಹುಡುಕಿಕೊಂಡು ನ್ಯಾಯಾಲಯಕ್ಕೆ ಬರುವವರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯವನ್ನು ಒದಗಿಸುವ ಹೊಣೆಗಾರಿಕೆಯನ್ನು ಸಂತೋಷದಿಂದ ನಿಭಾಯಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂದಾಪುರ ನಗರದ ಸಣ್ಣ ಜಾಗದಲ್ಲಿ ಸುಂದರವಾದ ನ್ಯಾಯಾಲಯ ಕಟ್ಟಡ ಎದ್ದು ನಿಂತಿದೆ. ಈ ಸೌಲಭ್ಯಗಳ ಸದುದ್ದೇಶವಾಗಬೇಕಾದರೆ ವಕೀಲರ ಹಾಗೂ ಕಕ್ಷಕಿದಾರರ ಪಾತ್ರವೂ ಅತಿ ಮುಖ್ಯವಾಗಿದೆ. ಕುಂದಾಪುರ ಪರಿಸರದಲ್ಲಿ ಹೇಳಿಕೊಳ್ಳುವಂತಾ ಐಟಿ/ಬಿಟಿ ಅಥವಾ ಕಾರ್ಪೋರೇಟ್ ಪ್ರಕರಣಗಳು ದಾಖಲಾಗುವುದಿಲ್ಲ. ಬಹುತೇಕ ಕೃಷಿ, ಜಮೀನು, ಮೋಟಾರ್ ಕಾಯಿದೆ ಹಾಗೂ ಗ್ರಹಚಾರ ಕೆಟ್ಟಾಗ ಬರುವ ಅಪರಾಧ ಪ್ರಕರಣಗಳು ದಾಖಲಾಗುತ್ತದೆ. ಅಪಘಾತ ಪ್ರಕರಣಗಳನ್ನು ಪರ್ಸೆಂಟೇಜ್ ಆಧಾರದಲ್ಲಿ ನಡೆಸಬೇಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ಥಿ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕುಂದಾಪುರ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಕರಾವಳಿಯ ಪ್ರಮುಖ ತಾಣವೂ ಆಗಿದೆ. ಇಲ್ಲಿನ ವಿಶಿಷ್ಠ ಕುಂದಗನ್ನಡ ಭಾಷೆ ಹಾಗೂ ಪಂಚಗಂಗಾವಳಿ ಸಂಗಮ ಇಲ್ಲಿನ ವೈಶಿಷ್ಟ್ಯವನ್ನು ಹೆಚ್ಚಿಸಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ 5 ನ್ಯಾಯಾಲಯಗಳ ಅವಶ್ಯಕತೆಗಾಗಿ ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಒಳ್ಳೆಯ ವಾತಾವರಣದಲ್ಲಿ ನ್ಯಾಯದಾನ ಪ್ರಕ್ರಿಯೆಗಳು ನಡೆಯುವುದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಅವರು, ಮಗು ಬೆಳೆದಂತೆ ಅಗತ್ಯತೆಗಳು ಹೆಚ್ಚುತ್ತದೆ. ಎಲ್ಲ ವ್ಯವಸ್ಥೆಗಳು ಹಾಗೆಯೇ, ಇದಕ್ಕೆ ನ್ಯಾಯಾಲಯವೂ ಹೊರತಾಗಿಲ್ಲ. ಹಿಂದಿನ ಕಟ್ಟಡದಲ್ಲಿ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಒತ್ತಡದ ವಾತಾವರಣಗಳಿತ್ತು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಹಾಗೂ ಇತರರಿಗೆ ಒಳ್ಳೆಯ ವಾತಾವರಣದ ಅವಶ್ಯಕತೆ ಇರುತ್ತದೆ. ಹಳೆಯ ಉಪಯೋಗಕ್ಕೆ ಬಾರದ ವಸ್ತುಗಳ ವಿಲೆವಾರಿಯಾಗಬೇಕು. ನೂತನವಾಗಿ ಆರಂಭಿಸಲಾಸ ಇ-ಸೇವಾ ಕೇಂದ್ರದ ಉಪಯೋಗ ಪಡೆದುಕೊಳ್ಳಬೇಕು.ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಗೆ ಸರ್ವರ ಸಹಕಾರವೂ ಬೇಕು. ನ್ಯಾಯಾಲಯಕ್ಕೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನೂತನ ಕಟ್ಟಡದಲ್ಲಿ ಪ್ರಾರಂಭಿಸಲಾದ ಇ-ಸೇವಾ ಕೇಂದ್ರ, ಸಹಾಯವಾಣಿ ಕೇಂದ್ರ ಹಾಗೂ ವಿಡಿಯೋ ಕಾನ್ಫರೆನ್ಸ್ ಕೊಠಡಿಯ ಉದ್ಘಾಟನೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜು ಬಿ.ಟಿ ಅವರನ್ನು ಕುಂದಾಪುರ ವಕೀಲರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಕರ್ನಾಟಕ ಉಚ್ಛ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿಗಳಾದ ಟಿ. ಜಿ. ಶಿವಶಂಕರೇ ಗೌಡ, ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಟಿ. ವೆಂಕಟೇಶ್ ನಾಯ್ಕ್ , ಸಮೀರ್ ನಜೀರ್, ಅರ್ಚನಾ ನಟರಾಜ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜು ಬಿ.ಟಿ ಹಾಗೂ ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಪ್ರಮೋದ್ ಹಂದೆ ಇದ್ದರು.
ಉಡುಪಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಮಣ್ಯ ಜೆ.ಎನ್ ಸ್ವಾಗತಿಸಿದರು, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ ವಂದಿಸಿದರು, ಉಪಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು, ಮಾಲಿನಿ ರಮೇಶ್ ಪ್ರಾರ್ಥಿಸಿದರು.
ಇದನ್ನೂ ಓದಿ:
► ಬೈಂದೂರು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಉದ್ಘಾಟನೆ – https://kundapraa.com/?p=57565 .