ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋರೋನಾ ಪಾಸಿಟಿವ್ ಪ್ರಕರಣಗಳನ್ನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ತಕರು ಹಾಗೂ ಸಾರ್ವಜನಿಕರ ಹಿತ ರಕ್ಷಣೆಗಾಗಿ ಜುಲೈ.13 ರಿಂದ ಜುಲೈ.31 ತನಕ ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್ಲ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಮೆಡಿಕಲ್, ಹಾಲು, ಹೋಟೆಲ್ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಲಾಗುತ್ತಿದೆ.
ಕುಂದಾಪುರದ ಶೆರೋನ್ ಹೋಟೆಲ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಂದಾಪುರದ ಸಮಾನ ಮನಸ್ಕ ವರ್ತಕರು ಈ ನಿರ್ಣಯ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ವ್ಯಾಪಾರಸ್ಥ ರಾಧಾಕೃಷ್ಣ ಅವರು ಮಾತನಾಡಿ ಕೊರೊನಾ ಸಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150 ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೂ ಮೊದಲು ಎಲ್ಲ ಅಂಗಡಿಗಳಿಗೂ ಭೇಟಿ ಕೊಟ್ಟು ಮನವಿ ಮಾಡಿದ್ದೇವೆ. ಸ್ವಯಂ ಪ್ರೇರಿತ ಬಂದ್ಗೆ ಎಲ್ಲರ ಬೆಂಬಲ ಸಿಕ್ಕಿದೆ ಎಂದವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಶ್ರೀಧರ್ ಪಿ.ಎಸ್. ಮಾತನಾಡಿ ಎಲ್ಲ ವರ್ತಕರಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಗ್ರಾಹಕರು ಕೂಡ ಸಹಕರಿಸಬೇಕು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತದೊಂದಿಗೆ ನಮ್ಮ ಹೊಣೆಗಾರಿಕೆಯೂ ಇದೆ. ಸ್ವಯಂ ಪ್ರೇರಿತ ಬಂದ ಕುರಿತಂತೆ ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗುವುದು ತಿಳಿಸಿದರು.
ಈ ಸಂದರ್ಭದಲ್ಲಿ ವರ್ತಕರಾದ ವಿಜಯ ಕುಮಾರ್ ಶೆಟ್ಟಿ, ಹುಸೇನ್ ಹೈಕಾಡಿ, ಅಬು ಮಹಮ್ಮದ್, ತಬ್ರೈಜ್, ಸಂತೋಷ್, ಸತೀಶ್ ಹೆಗ್ಡೆ, ಜಸ್ವಂತ್ ಸಿಂಗ್, ಜುವೆಲ್ಲರ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೇಟ್, ಸುರೇಂದ್ರ ಶೇಟ್, ಮತ್ತಿತರರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಜುಲೈ 13ರಿಂದ ಎಲ್ಲ ದಿನಸಿ, ತರಕಾರಿ, ಹಣ್ಣು, ಎಲೆಕ್ಟ್ರಿಕಲ್ ಶೋ ರೂಂ, ಮೊಬೈಲ್, ಬಟ್ಟೆ, ಬೇಕರಿ, ಜೂಸ್ ಪಾರ್ಲರ್, ಸೆಲೂನ್, ಬೂಟಿ ಪಾರ್ಲರ್ಗಳು, ಚಿನ್ನದ ಮಳಿಗೆಗಳು ಸೇರಿದಂತೆ ಎಲ್ಲ ಅಂಗಡಿಗಳು ಜುಲೈ ಅಂತ್ಯದವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ತೆರೆದಿರಲಿದೆ. ತುರ್ತು ಅಗತ್ಯತೆಯಾದ ಮೆಡಿಕಲ್, ಅಧಿಕೃತ ಹಾಲು ಮಾರಾಟ ಅಂಗಡಿ, ಎಲ್ಲ ಹೋಟೆಲ್ಗಳು ಎಂದಿನಂತೆ ತೆರೆಯಲಿದೆ ಎಂದು ತಿಳಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/