ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:ತಾಲೂಕಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ರಿ. ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಹಾಗೂ ನೂತನ ತರಗತಿ ಕೊಠಡಿ ಮತ್ತು ಅಡುಗೆ ಕೋಣೆಯ ಉದ್ಘಾಟನಾ ಸಮಾರಂಭ ಭಾನುವಾರ ಶಾಲೆಯ ಬಯಲು ಆಂಗಣದಲ್ಲಿ ಜರುಗಿತು.
ಶಾಲೆಯ ಮಧ್ಯಾಹ್ನದೂಟದ ಅಡುಗೆ ಕೋಣೆ ಹಾಗೂ ಅಡುಗೆ ಸಲಕರಣೆಗಳನ್ನು ಒದಗಿಸಿದ ಗೋವಿಂದ ಬಾಬು ಪೂಜಾರಿ ಅವರ ಹೆತ್ತವರಾದ ಬಾಬು ಪೂಜಾರಿ – ಮಂಜಮ್ಮ ದಂಪತಿಗಳು ಉದ್ಘಾಟಿಸಿದರು. ನೂತನ ಶಾಲಾ ಕೊಠಡಿಗಳನ್ನು ಸೆಲ್ಕೊ ಜನರಲ್ ಮ್ಯಾನೇಜರ್ ಜಗದೀಶ್ ಪೈ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೆಲ್ಕೊ ಇಂಡಿಯಾದ ಜನರಲ್ ಮ್ಯಾನೆಜರ್ ಜಗದೀಶ ಪೈ ಮಾತನಾಡಿ, ವಿಕಲಚೇತನರಿಗೆ ಕರುಣೆಯ ಅಗತ್ಯವಿಲ್ಲ. ಬದಲಿಗೆ ಅವಕಾಶಗಳು ಬೇಕಿದೆ. ಅವರಿಗೂ ತರಬೇತಿ ನೀಡುವುದು, ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಎಲ್ಲರಂತೆ ಬದುಕುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಬದುಕಿನಲ್ಲಿ ಕಷ್ಟಪಟ್ಟು ಬೆಳೆದು ಬಂದು ತನಗೆ ಸಮಾಜದಲ್ಲಿ ಆರ್ಥಿಕ ಅಗತ್ಯವುಳ್ಳವರಿಗೆ ಸ್ಪಂದಿಸುವುದರಲ್ಲಿ ಸಂತೋಷವಿದೆ. ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವೂ ಆಗಿದ್ದು, ಆ ದಿಸೆಯಲ್ಲಿ ನಾರಾಯಣ ವಿಶೇಷ ಮಕ್ಕಳ ಶಾಲೆಗೆ ಅಡುಗೆ ಕೋಣೆ ನಿರ್ಮಿಸುವ ಭರವಸೆ ನೀಡಿದ್ದೆ. ಅದೀಗ ನೆರವೇರಿರುವುದು ಖುಷಿ ತಂದಿದೆ. ಮುಂದೆಯೂ ಶಾಲೆಯ ವಿಶೇಷ ಮಕ್ಕಳ ಅಗತ್ಯತೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಸೆಲ್ಕೋ ಇಂಡಿಯಾ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಗುರು ಪ್ರಕಾಶ್ ಶೆಟ್ಟಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಕರಣ್ ಕುಮಾರ್ ಪೂಜಾರಿ, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ ಅತಿಥಿಗಳಾಗಿದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟೀ ಸುರೇಶ್ ತಲ್ಲೂರು ಸ್ವಾಗತಿಸಿದರು. ಟ್ರಸ್ಟೀ ರಾಜಾರಾಮ ತಲ್ಲೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯೋಪಧ್ಯಾಯಿನಿ ಪ್ರೇಮಾ ಲೂವಿಸ್ ವಾರ್ಷಿಕ ವರದಿ ವಾಚಿಸಿದರು. ವಸಂತ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿವಿಧ ಸ್ವರ್ಧೆಗಳ ವಿಜೇತ ಮಕ್ಕಳು ಹಾಗೂ ಪಾಲಕರಿಗೆ ಬಹುಮಾನ ವಿತರಣೆ, ಬಳಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಸೆಲ್ಕೊ ಇಂಡಿಯಾದ ಉಪಕರಣಗಳು ಮತ್ತು ವಿಶೇಷ ಮಕ್ಕಳು ತಯಾರಿಸಿದ ’ಸ್ವಾವಲಂಬಿ’ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.