ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕುಂದಾಪುರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮನೆ, ಶಾಲೆ, ದೇವಸ್ಥಾನಗಳು, ಸಭಾ ಮಂದಿರಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಒಂದೇ ದಿನ ಐದುಸಾವಿರಕ್ಕೂ ಹೆಚ್ಚು ರಂಗೋಲಿ ರಚನೆ ಮಾಡುವ ಮೂಲಕ ಕುಂದಾಪುರದ ರಂಗೋಲಿ ಪ್ರಿಯರು ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ನಡುವೆ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ವಠಾರದಲ್ಲಿ ನಡೆದು ಬಹಳ ಆಕರ್ಷಣೆ ಪಡೆಯಿತು. ನೂರಾರು ಮಂದಿ ವಿದ್ಯಾರ್ಥಿಗಳು , ಹಾಗೂ ಹಿರಿಯರು ಪೈಪೋಟಿಯಲ್ಲಿ ರಂಗೋಲಿ ರಚಿಸುವ ಮೂಲಕ ರಂಗೋಲಿಯ ವೈವಿಧ್ಯಮಯ ಚಿತ್ರಣದ ಪ್ರದರ್ಶನ ನೀಡಿದರು.
ಕುಂದಾಪುರದ ಬಹುತೇಕ ರಸ್ತೆ ಬದಿಯಲ್ಲಿರುವ ಮನೆಗಳಲ್ಲಿ ಮುಂಜಾನೆಯಿಂದಲೇ ಗೃಹಿಣಿಯರು ಮಕ್ಕಳು ರಂಗೋಲಿ ರಚಿಸಿದ್ದು ರಂಗೋಲಿ ಉತ್ಸವಕ್ಕೆ ಸ್ಫೂರ್ತಿ ತುಂಬಿದರು. ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದ ರಸ್ತೆ, ಚಿಕ್ಕನ್ಸಾಲ್ ರಸ್ತೆ , ರಾಮ ಮಂದಿರ ರಸ್ತೆ ಖಾರ್ವಿಕೇರಿ ಮದ್ದುಗುಡ್ಡೆ ಈಸ್ಟ್ ಬ್ಲಾಕ್ ರಸ್ತೆ, ವೆಸ್ಟ್ ಬ್ಲಾಕ್ ರಸ್ತೆ , ಬಡಾಕೆರೆ, ಕುಂದೇಶ್ವರ ದೇವಸ್ಥಾನದ ರಸ್ತೆ , ಸಲೀಂ ಆಲಿ ರಸ್ತೆ, ವಡೇರ ಹೋಬಳಿ ರಸ್ತೆ , ನಾನಾ ಸಾಹೇಬ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಹಬ್ಬದ ವಾತಾವರಣದಲ್ಲಿ ರಂಗೋಲಿ ರಚನೆ ನಡೆಯಿತು. ಬಹುತೇಕ ಶಾಲೆಗಳಲ್ಲೂ ರಂಗೋಲಿ ಪ್ರದರ್ಶನ ನಡೆದಿದೆ. ಬಿ.ಆರ್.ರಾಯರ ಹಿಂದೂ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯೂ ನಡೆದು ಬಹುಮಾನ ನೀಡಲಾಗಿದೆ. ಮುಖ್ಯ ಬೀದಿಗಳಲ್ಲಿ ರಂಗೋಲಿ ರಚನೆ ಬಹಳ ಕುತೂಹಲಕಾರಿ ವಿಷಯವಾಗಿ ಎಲ್ಲರ ಮನ ಗೆದ್ದಿತು.
ಉದ್ಘಾಟನೆ:
ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ವಠಾರದಲ್ಲಿ ನಡೆದ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯನ್ನು ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಉದ್ಘಾಟಿಸಿ ಮಾತನಾಡಿ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಪೂರ್ವ ಕಲೆಯಾದ ರಂಗೋಲಿ ಯನ್ನು ಉಳಿಸಿ ಬೆಳೆಸಲು ಹಮ್ಮಿಕೊಂಡಿರುವ ಈ ಉತ್ಸವ ನಿಜಕ್ಕೂ ಪ್ರಶಂಸನೀಯ. ಆಧುನಿಕ ಪ್ರಭಾವಗಳಿಂದ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿರುವ ರಂಗೋಲಿ ಈ ಸಮಯದಲ್ಲಿ ಇಂತಹ ಉತ್ಸವದಿಂದ ಬಹಳಷ್ಟು ಕಾಲ ಉಳಿಯುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ಶಾಲಾ ಸಂಚಾಲಕ ಕೆ. ರಾಧಾಕೃಷ್ಣ ಶೆಣೈ, ಡಾ| ಭಾರತಿ ಮರವಂತೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಅಮರ್ಪ್ರಸಾದ್ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯ್ಕ್, ನಿವೃತ್ತ ಪ್ರಾಂಶುಪಾಲ ರೇವಣ್ಕರ್, ಲೇಖಕ ಕೊ.ಶಿವಾನಂದ ಕಾರಂತ ಉಪಸ್ಥಿತರಿದ್ದರು.
ಜಾನಪದ ವಿದ್ವಾಂಸ ಕನರಾಡಿ ವಾದಿರಾಜ ಭಟ್ಟ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಉತ್ಸವ ಸಮಿತಿಯ ಯು.ಎಸ್.ಶೆಣೈ ಸ್ವಾಗತಿಸಿ , ಪಿ.ಜಯವಂತ ಪೈ ವಂದಿಸಿದರು, ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಧಾಕೃಷ್ಣ ಭಟ್, ಚೇತನ್ ಕುಮಾರ್, ಬೇಬಿ, ವೆಂಕಟೇಶ ಸಹಕರಿಸಿದರು. ಹಂದಕುಂದ ಸೋಮಶೇಖರ ಶೆಟ್ಟಿ ಸ್ಪರ್ಧಾನಿಯಮಗಳನ್ನು ತಿಳಿಸಿದರು.
ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಆಕರ್ಷಕ ವೈವಿಧ್ಯಮಯ ರಂಗೋಲಿಯನ್ನು ರಚಿಸಿದರು. ಇದೇ ಸಂದರ್ಭ ಬೆಳಿಗ್ಗೆಯಿಂದ ಕುಂದಾಪುರ ಪುರಸಭಾ ವ್ಯಾಪ್ತಿಯ ಹೆಚ್ಚಿನ ಮನೆಗಳಲ್ಲೂ ರಂಗೋಲಿ ಬಿಡಿಸಲಾಯಿತು. ದೇವಸ್ಥಾನ, ಸಭಾಂಗಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಂಗೋಲಿ ರಚಿಸಲಾಯಿತು.
ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ದಾಖಲೆಯ ೩೪ ಅಡಿಯ ಆಧುನಿಕ, ಸಂಸ್ಕೃತಿಯ ಹಾಗೂ ಆದಿವಾಸಿ ಬುಡಕಟ್ಟು ಕಲೆಗಳ ಸಮನ್ವಯದ ಅಪೂರ್ವ ರಂಗೋಲಿಯನ್ನು ರಂಗೋಲಿಯಲ್ಲಿ ಡಾಕ್ಟರೇಟ್ ಪಡೆದಿರುವ ಡಾ|ಭಾರತೀ ಮರವಂತೆ ರಚಿಸಿದರು.