ಗ್ರಾಮೀಣ ಭಾರತ ಮತ್ತು ಪತ್ರಿಕೋದ್ಯಮದ ಕುರಿತು ವಿಶೇಷ ಉಪನ್ಯಾಸ
ಕುಂದಾಪುರ: ಶೋಷಿತರು ಮತ್ತು ತುಳಿತಕ್ಕೊಳಗಾದವರಿಗೆ ಸಮಾನತೆ ಕಲ್ಪಿಸಿ ಕೊಡುವಲ್ಲಿ ಸಶಕ್ತರಾಗದಿದ್ದಲ್ಲಿ ಪ್ರಜಾಪ್ರಭುತ್ವದ ಆಶಯಕ್ಕೆ ಯಾವ ಬೆಲೆ ಸಿಕ್ಕಿದಂತಾಗುತ್ತದೆ? ಇದನ್ನು ಸರಿಮಾಡುವ ನಿಟ್ಟಿನಲ್ಲಿ ಪತ್ರಿಕೆ ಮಾಧ್ಯಮಗಳು ಶೋಷಿತರ ಪರವಾಗಿ ನಿಂತಿದೆಯೇ ಎಂದು ಖ್ಯಾತ ಪತ್ರಕರ್ತ ಜಾನ್ ಡಿ’ಸೋಜಾ ಪ್ರಶ್ನಿಸಿದರು.
ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಸ್ಕೂಲ್ ಹಾಲ್ನಲ್ಲಿ ಗ್ರಾಮೀಣ ಭಾರತ ಮತ್ತು ಪತ್ರಿಕೋದ್ಯಮದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
[quote bgcolor=”#ffffff” arrow=”yes” align=”right”] ಅಭಿವೃದ್ಧಿಯ ಕಲ್ಪನೆ ಬದಲಾಗಬೇಕು:
ಸಂಕೀರ್ಣ ಹಾಗೂ ಸಂಕುಚಿತವಾಗಿ ಮುನ್ನಡೆಯುತ್ತಿರುವ ದೇಶದಲ್ಲಿ ಸ್ವಾತಂತ್ರ್ಯ ದೊರೆತು 6 ದಶಕಗಳು ಕಳೆದರು ಗ್ರಾಮೀಣ ಭಾಗಗಳು ಸಮಸ್ಯೆಗಳಿಂದ ಮುಕ್ತವಾಗಿಲ್ಲ. ರಾಜಕೀಯ ಇಚ್ಚಾಶಕ್ತಿಯ ಕೊರತೆ, ಜನರಲ್ಲಿನ ಸಾಮಾಜಿಕ ಬದ್ಧತೆಯ ನಿಷ್ಕ್ರೀಯತೆ ಅಭಿವೃದ್ಧಿಯ ಹಿನ್ನಡೆಗೆ ಕಾರಣ. ಅಭಿವೃದ್ಧಿಯೆಂದರೆ ಕೇವಲ ಬಹುಮಹಡಿ ಕಟ್ಟಡ ನಿರ್ಮಾಣ, ಅಂತರ್ಜಾಲ ಅಭಿವೃದ್ಧಿ, ಡಿಜಿಟಲೀಕರಣ ಎಂದು ಮನೆ ಮಾಡಿರುವ ಭ್ರಮೆ ಎಲ್ಲರನ್ನು ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯತೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಪತ್ರಿಕೋದ್ಯಮ ಕಾರ್ಯಾನಿರ್ವಹಿಸಿದಾಗ ಉತ್ತಮ ಸಮಾಜ ನಿರ್ಮಾಣದ ಪ್ರೇರಕ ಶಕ್ತಿಯಾಗಲು ಸಾಧ್ಯ ಎಂದು ಜಾನ್ ಡಿಸೋಜಾ ಅಭಿಪ್ರಾಯಪಟ್ಟರು. [/quote]
ಇಂದು ಮಾಧ್ಯಮಗಳು ಸಂಪಾದಕನ, ಪತ್ರಕರ್ತನ ದೃಷ್ಠಿಯಲ್ಲಿ ಸಾಗದೇ ಉದ್ಯಮಿಯ ದೃಷ್ಠಿಕೋನದಲ್ಲಿ ಮುನ್ನಡೆಯುತ್ತಿರುವುದರಿಂದ ದಿಕ್ಕು ದಿಸೆಯಿಲ್ಲದ ಜನರಿಗೆ ಸರಿಯಾದ, ಸ್ಪಷ್ಟವಾದ, ನೇರವಾದ ದೃಷ್ಠಿಯನ್ನು ನೀಡಲು ಸೋತಿವೆ. ಬಂಡವಾಳಶಾಹಿಗಳ ಹಿಡಿತದಲ್ಲಿ ಮಾಧ್ಯಮ ನಲುಗುತ್ತಿರುವುದರಿಂದ ಪತ್ರಕರ್ತರು ಪತ್ರಕರ್ತರಾಗಿರದೇ ಉದ್ಯೋಗಿಗಳಂತೆ ಕೆಲಸ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿರುವುದು ವಿಷಾದನೀಯ ಎಂದರು.
ಗ್ರಾಮೀಣ ಭಾರತದ ಆಶಾಕಿರಣ:
ಒಂದು ಕಾಲದಲ್ಲಿ ಪತ್ರಿಕೆಗಳು ಗ್ರಾಮೀಣ ಭಾರತದ ಆಶಾಕಿರಣವಾಗಿದ್ದವು. ಬಾಲಗಂಗಾಧರ ತಿಲಕರು ಗಣೋಶೋತ್ಸವದ ಮೂಲಕ ಸಂಘಟನೆ, ತನ್ನದೇ ಪತ್ರಿಕೆಯ ಮೂಲಕ ಸಾಮಾಜಿಕ ಜಾಗೃತಿಯನ್ನುಂಟು ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ಮಾ ಗಾಂಧಿಯವರು ಪತ್ರಿಕೆಯನ್ನು ಹೊರ ತಂದು ಜನರಲ್ಲಿ ರಾಷ್ಟ್ರೀಯತೆಯ ಭಾವವನ್ನು ಜಾಗೃತಗೊಳಿಸಿದರು. ದೇಶವು ಪತ್ರಿಕೆಗಳಿಂದ ಹೊಸ ದಿಕ್ಕಿನತ್ತ ಸಾಗುತ್ತಿದ್ದವು. ಇಂದು ಗೊತ್ತು ಗುರಿಯಿಲ್ಲದೇ ಸಾಗುತ್ತಿರುವ ಪತ್ರಿಕೋದ್ಯಮದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ಪ್ರಾಜ್ಞರು ಕಾರ್ಯನಿರ್ವಹಿಸಬೇಕಿದೆ. ಸಾಮಾಜಿಕ ಬದ್ಧತೆಯಿಲ್ಲದೇ ಸಾಗುವ ಪತ್ರಿಕೆಗಳು ಗ್ರಾಮೀಣ ಭಾರತದ ಆಶಾಕಿರಣವಾಗಲು ಸಾಧ್ಯವಿಲ್ಲ ಎಂದವರು ಹೇಳಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಪೂರ್ವಾಧ್ಯಕ್ಷ ಟಿ. ಬಿ. ಶೆಟ್ಟಿ ಪರಿಚಯಿಸಿದರು. ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ನಿಯೋಜಿತ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ವಂದಿಸಿದರು. ಡಾ. ಛಾಯಾ ಹೆಬ್ಬಾರ್ ಸಹಕರಿಸಿದರು.