ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಛಿದ್ರವಾಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯು ಕಾರ್ಯ ದೊಡ್ಡದು. ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯದ ಬದುಕು ಕಂಡುಕೊಳ್ಳಬೇಕಿದ್ದರೆ, ಪರಸ್ಪರರ ಚಿಂತನೆಯನ್ನು ಗೌರವಿಸಿ ಎಲ್ಲರನ್ನೂ ಸಮಾನವಾಗಿ ಕಾಣುವಂತವರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ಧರಾಮಯ್ಯ ಹೇಳಿದರು.
ಅವರು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಗುಲ್ವಾಡಿ ತೋಟದಮನೆ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 2016ನೇ ಸಾಲಿನ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಸ್ವಾರಕ ಗೌರವ ಪುರಸ್ಕಾರವನ್ನು ಪತ್ರಕರ್ತ ಕೆ.ಪಿ ಮಂಜುನಾಥ ಸಾಗರ್ ಅವರಿಗೆ ಪ್ರದಾನಿಸಿ ಮಾತನಾಡಿದರು.
ಸಂತೋಷ್ಕುಮಾರ್ ಗುಲ್ವಾಡಿ ಪತ್ರಿಕೋದ್ಯಮ, ಶಿಕ್ಷಣ ಹಾಗೂ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದೆ ಸೇವೆ ಅಪಾರವಾದುದು. ಅವರ ಗರಡಿಯಲ್ಲಿ ಬೆಳೆದು ಎತ್ತರಕ್ಕೇರಿದವರ ಸಂಖ್ಯೆ ದೊಡ್ಡದಿದೆ. ಗುಲ್ವಾಡಿ ಅವರ ಹುಟ್ಟೂರಿನಲ್ಲಿ ಅವರನ್ನು ಸ್ಮರಿಸುವ ಕಾರ್ಯವಾಗುತ್ತಿರುವುದು ಶ್ಲಾಘನೀಯ ಎಂದ ಅವರು ಯಾಕೂಬ್ ಖಾದರ್ ಗುಲ್ವಾಡಿ ಅವರು ಸಂತೋಷ್ಕುಮಾರ್ ಗುಲ್ವಾಡಿ ಅವರನ್ನು ಏಕಲವ್ಯನಂತೆ ಅನುಸರಿಸಿದವರು. ಗುಜರಿಯಂಗಡಿಯಲ್ಲಿದ್ದುಕೊಂಡು ಓದು, ಬರವಣಿಗೆಯ ಬಗೆಗೆ ಆಸಕ್ತಿ ಮೂಡಿಕೊಂಡು ದೊಡ್ಡ ಸಾಧನೆ ಮಾಡಿದ್ದಾರೆ. ಇಂದು ಅವರು ನಿರ್ಮಿಸಿದ ’ರಿಸರ್ವೇಶನ್’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಸಾಧಕರಾದ ಡಾ. ಪ್ರಕಾಶ್ ತೋಳಾರ್ ಮರವಂತೆ, ನಾಗರಾಜ ಶೆಟ್ಟಿ ಗುಲ್ವಾಡಿ, ಭುಜಂಗ ಕೊರಗ ಮರವಂತೆ ಹಾಗೂ ಸಂತೋಷ್ ಬಳ್ಕೂರು ಅವರನ್ನು ಸನ್ಮಾನಿಸಲಾಯಿತು. ನೂತನ ಗುಲ್ವಾಡಿ ಪಂಚಾಯತ್ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.
ಗುಲ್ವಾಡಿ ಟಾಕೀಸ್ ನಿರ್ಮಾಣದ ರಿಸರ್ವೇಶನ್ ಚಿತ್ರದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ಅಟ್ಲಾಸ್ ಹೋಪರ್ಸ್ನ ದೇವೇಂದ್ರ ಬಡಿಗೆರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ್, ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಮೊಹಮದ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾದರ್ ಗುಲ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಪ್ರದೀಪ್ಕುಮಾರ್ ಶೆಟ್ಟಿ ಕೆಂಚನೂರು ಪ್ರಶಸ್ತಿ ಪುರಸ್ಕೃತರ ಪರಿಚಯ ವಾಚಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು. ಮನು ಹಂದಾಡಿ ಹಾಗೂ ಸಂಧ್ಯಾ ಶೆಣೈ ಅವರಿಂದ ಹಾಸ್ಯ ಸಂಜೆ, ಡಾ. ಸತೀಶ್ ಪೂಜಾರಿ ಮತ್ತು ಮಾಶೂಕ್ ಹೆಮ್ಮಾಡಿ ಅವರಿಂದ ಕನ್ನಡ ಮತ್ತು ಬ್ಯಾರಿ ಹಾಡುಗಳ ಗಾಯನ ಜರುಗಿತು