ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಲೇಖನ.
ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಮುಂತಾದ ಲೋಹಗಳಿಂದ ಮೂರ್ತಿ, ದಾರಂದ, ದ್ವಾರ ಬಾಗಿಲು, ಪಲ್ಲಕ್ಕಿ ಮುಂತಾದವುಗಳನ್ನು ತಯಾರಿಸುವ ಮೂಲಕ ಶಿಲ್ಪಕಲಾಲೋಕಕ್ಕೆ ವಿಶೇಷ ಮೆರಗು ನೀಡಿದ ಕಲಾಶಿಲ್ಪಿ ಕೋಟ ಗಣೇಶ ಆಚಾರ್ಯ.
ಒಂದು ಕಲೆ ಸಿದ್ಧಿಯಾಗಬೇಕಾದರೆ ಒಂದೋ ವಂಶಪಾರಂಪರ್ಯವಾಗಿ ಬಂದಿರಬೇಕು ಅಥವಾ ತನ್ನ ಸ್ವ ಪ್ರಯತ್ನದಿಂದಾಗಿ ಕಲೆಯನ್ನು ಸಿದ್ಧಿಸಿ ಮುಂದುವರಿಸಿಕೊಂಡು ಬಂದಾಗ ಆ ಕಲೆಯ ಸತ್ವವನ್ನು ಹೀರಿಕೊಳ್ಳಲು ಸಾಧ್ಯ. ಗಣೇಶ ಆಚಾರ್ಯ ರಿಗೆ ಈ ಕಲೆ ವಂಶಪಾರಂಪರ್ಯವಾಗಿ ಬಂದಿದೆ.
ಉಡುಪಿ ತಾಲೂಕಿನ ಕೋಟತಟ್ಟುವಿನ ಶಂಕರ ಆಚಾರ್ಯ ಹಾಗೂ ಗಿರಿಜಾ ಆಚಾರ್ಯರ ಮೂರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ಗಣೇಶ ಆಚಾರ್ಯರು ತಂದೆಯ ರಕ್ತಗತವಾದ ಕಲೆಯನ್ನು ಮುಂದುವರಿಸಿಕೊಂಡು ಬಂದ ಕಲಾಕಾರ. ಕಲಾ ಕ್ಷೇತ್ರದಲ್ಲಿ ಸದ್ದಿಲ್ಲದೇ ಸುದ್ದಿ ಆಗುವವರು ಒಂದು ವರ್ಗವಾದರೆ ಇನ್ನೋಂದು ಸದ್ದು ಮಾಡಿ ಸುದ್ದಿ ಆಗುವವರು ಇನ್ನೊಂದು ವರ್ಗ. ಅದರಲ್ಲಿ ಗಣೇಶ ಆಚಾರ್ಯರು ಸದ್ದಿಲ್ಲದ ಸುದ್ದಿ ಆದವರ ಸಾಲಿನಲ್ಲಿ ಸೇರುತ್ತಾರೆ. ಅರ್ಥಾತ್ ಪ್ರಚಾರಕ್ಕೆ ಕಟ್ಟುಬೀಳದ ಮಿತಭಾಷಿ. ಕೇವಲ ಕರಕುಶಲ ಕಲೆಯಿಂದ ತನ್ನ ಕಲಾನೈಪುಣ್ಯತೆಯನ್ನು ತೆರೆದಿಡುವ ಕಲಾನಿಪುಣ.
ಕೋಟದ ಹಲವು ಮಕ್ಕಳತಾಯಿ ಶ್ರೀ ಅಮೃತೇಶ್ವರೀ ದೇವಸ್ಥಾನದ ರಜತ ದ್ವಾರ, ಇನ್ನಿತರ ತಾಮ್ರ,ಹಿತ್ತಾಳೆ ಕೆಲಸ , ಕೋಟ ಹೀರೇಮಹಾಲಿಂಗೇಶ್ವರ ದೇವಸ್ಥಾನದ ರಜತ ಪೀಠ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಉತ್ಸವ ಮೂರ್ತಿಗೆ ಚಿನ್ನದ ಪ್ರಭಾವಳಿ, ಶ್ರೀ ಮಂಗಳಾದೇವಿ ದೇವಿ ದೇವಸ್ಥಾನದ ರಜತ ದ್ವಾರ, ತೀರ್ಥಮಂಟಪ ಗಣಪತಿ ವಿಗ್ರಹಕ್ಕೆ ಚಿನ್ನದ ಕವಚ, ಶಂಕರನಾರಾಯಣ ದೇವಸ್ಥಾನದ ಉತ್ಸವ ಮೂರ್ತಿಗೆ ಚಿನ್ನದ ಕವಚ, ಆನೆಗುಡ್ಡೆ ದೇವಸ್ಥಾನದ ಬೆಳ್ಳಿಯ ಪಲ್ಲಕ್ಕಿ ಹಾಗೂ ತೊಟ್ಟಿಲು, ತುಮಕೂರಿನ ಲಕ್ಷ್ಮೀ ಮೂರ್ತಿಗೆ ಚಿನ್ನದ ಕವಚ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ರಜತ ದ್ವಾರ, ದ್ವಾರಬಾಗಿಲು ಅಲ್ಲದೆ ಯಕ್ಷಗಾನ ಪರಿಕರಗಳಾದ ಕೀರಿಟ, ಆಕರ್ಷಕ ಬೆಳ್ಳಿಯ ದೀಪಾರತಿಗಳು ಹೀಗೇ ಕೇವಲ ಸ್ಥಳೀಯ ದೇವಸ್ಥಾನಗಳಿಗೆ ಇವರ ಕರಕುಶಲ ಕಲೆ ಸೀಮಿತವಾಗಿರದೆ ಕಾಸರಗೋಡಿನ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ರಜತ ದ್ವಾರ ಒಳಗೊಂಡಂತೆ ಹತ್ತು ಹಲವು ದೇವಸ್ಥಾನಗಳಲ್ಲಿ ಕಲಾನೈಪುಣ್ಯತೆ ಯನ್ನು ಕಾಣುದರೊಂದಿಗೆ ಅವರ ವೃತ್ತಿ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸುದರೊಂದಿಗೆ 2010 ರ ಉಡುಪಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಸಾಧನಶೀಲ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬಂದಿದೆ.
ಕಳೆದ ಸುಮಾರು ನಾಲ್ಕು ದಶಕಗಳಿಂದ ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕನಸು ಮಗ ನಿತ್ಯಾನಂದರ ಮೂಲಕ ಸಾಕಾರಗೊಂಡಿದೆ.