ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸೂಕ್ತ ಸಮಯದಲ್ಲಿ ಗುರುತಿಸಿ, ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅವರು ಉತ್ತಮ ವೇದಿಕೆಯನ್ನು ರೂಪಿಸಿಕೊಂಡು, ಬದುಕಿನ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಹೇಳಿದರು.
ಇಲ್ಲಿನ ಶಾರದಾ ವೇದಿಕೆಯಲ್ಲಿ ರವಿವಾರ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ವಿಂಶತಿ ಸಂಭ್ರಮದೊಂದಿಗೆ ಆಯೋಜಿಸಲಾದ ಸುರಭಿ ಜೈಸಿರಿ 2020 ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಮನುಷ್ಯನ ಬದುಕನ್ನು ಉತ್ತಮಗೊಳಿಸುತ್ತವೆ. ಎಂತಹ ಸನ್ನಿವೇಶವನ್ನೂ ಎದುರಿಸುವ ಗಟ್ಟಿತನ ರೂಪಿಸುತ್ತವೆ. ಇಂತಹ ಚಟುವಟಿಕೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ನಡೆಯಬೇಕು ಮತ್ತು ಇವೆಲ್ಲವನ್ನೂ ಸಂಘಟಿಸುವ ಸಂಸ್ಥೆಗಳಿಗೆ ಬಲ ತುಂಬುವ ಕೆಲಸವನ್ನು ಊರಿನವರು ಮಾಡಬೇಕು ಎಂದು ಆಶಿಸಿದರು.
ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ ದೀಪವೊಂದನ್ನು ಪ್ರಜ್ವಲಿಸುವ ಬತ್ತಿ ತನ್ನನ್ನು ತಾನೇ ದಹಿಸಿಕೊಂಡು ಬೆಳಕು ನೀಡುವಂತೆ, ಸಂಘ ಸಂಸ್ಥೆಗಳು ಉಳಿದು ಬೆಳಗಲು ಹತ್ತಾರು ಮಂದಿ ಪರಿಶ್ರಮ ಅಡಕವಾಗಿರುತ್ತವೆ. ಬದುಕು ನಿತ್ಯನೂತನವಾಗಬೇಕು. ಸಂಸ್ಥೆಯಲ್ಲಿ ಹೊಸತನ ತುಂಬಿರಬೇಕು ಹಾಗಿದ್ದಾಗಲೇ ಅದು ಬಹುಕಾಲ ಜನರ ಮನದಲ್ಲಿ ಉಳಿಯುತ್ತದೆ ಎಂದ ಅವರು ನಗರದ ಯಾಂತ್ರಿಕ ಬದುಕಿನ ನಡುವೆ ಮುಗ್ದತೆ ಮತ್ತು ವಾತ್ಸಲ್ಯ ಹಳ್ಳಿಗಳಲ್ಲಿ ಮಾತ್ರ ಕಾಣಲು ಸಾಧ್ಯವೆಂದರು.
ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ಇಪ್ಪತ್ತನೇ ವರ್ಷದ ಸಂಭ್ರಮದಲ್ಲಿದ್ದು, ಕಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹತ್ತಾರು ಯೋಜನೆಗಳು ಹಮ್ಮಿಕೊಳ್ಳಲಾಗಿದೆ. ಈವರೆಗೆ ಹಲವು ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾಸಕ್ತರ ಮನತಣಿಸಿದ ಹೆಮ್ಮೆ ಇದ್ದು, ಸಂಘಟನಾತ್ಮಕ ಪ್ರಯತ್ನದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದರು.
ಸಹಕಾರಿ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ರಾಜು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಯಕ್ಷಗಾನ ಗುರು ಪ್ರಶಾಂತ ಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಪತ್ರಕರ್ತ ಬಿ. ನರಸಿಂಹ ನಾಯಕ್, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ಉಪಸ್ಥಿತರಿದ್ದರು.
ಸುರಭಿ ರಿ. ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖಜಾಂಚಿ ನಾಗರಾಜ ಪಿ. ಯಡ್ತರೆ, ಕೀರ್ತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುರಭಿ ವಿದ್ಯಾರ್ಥಿಗಳಿಂದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ಜರುಗಿತು.