ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಮನೆ ಹಂತದಲ್ಲಿ ತ್ಯಾಜ್ಯ ವಿಂಗಡನೆ ಹಾಗೂ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ನನ್ನ ಕಸ ನನ್ನ ಜವಾಬ್ದಾರಿ ಅಥವಾ ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ ಎಂಬ ವಿಷಯದ ಕುರಿತು ಸ್ವಚ್ಛ ಭಾರತ-ಕಿರುಚಿತ್ರ ನಿರ್ಮಾಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ನಿಬಂಧನೆಗಳು: ಸ್ವಚ್ಛ ಭಾರತ್- ಕಿರುಚಿತ್ರ ಸ್ಪರ್ಧೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ), ಇವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಎಲ್ಲಾ ಆಸಕ್ತರಿಗೆ ಮುಕ್ತ ಅವಕಾಶವಿದೆ. ಕಿರುಚಿತ್ರವನ್ನು ತುಳು, ಕನ್ನಡ ಅಥವಾ ಆಂಗ್ಲಬಾಷೆಯಲ್ಲಿ ಮಾಡಬಹುದು.
ಕಿರುಚಿತ್ರದ ಗರಿಷ್ಟ ಅವಧಿಯು ೩ ನಿಮಿಷಗಳಾಗಿದ್ದು, ಕಿರುಚಿತ್ರವನ್ನು ಮಾರ್ಚ್ ೧ ಒಳಗಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾ), ಜಿಲ್ಲಾ ಪಂಚಾಯತ್, ಉಡುಪಿ ರಜತಾದ್ರಿ, ಮಣಿಪಾಲ ಇಲ್ಲಿಗೆ (ಡಿವಿಡಿ/ ಯುಎಸ್ಬಿ ಡ್ರೈವ್ ಓನ್ಲೀ) ಸಲ್ಲಿಸಬೇಕು, ನಂತರ ಬಂದ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಕಿರುಚಿತ್ರವು ಮೇಲೆ ತಿಳಿಸಿದ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿರಬೇಕು ಹಾಗೂ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತಿರಬೇಕು. ಸ್ಪರ್ಧೆಗೆ ಪರಿಗಣಿಸಿದ ಕಿರುಚಿತ್ರಗಳನ್ನು ಜನರಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಬಳಸಿಕೊಳ್ಳುವ ಹಕ್ಕನ್ನು ಉಡುಪಿ ಜಿಲ್ಲಾ ಪಂಚಾಯತ್ ಹೊಂದಿರುತ್ತದೆ.
ಕಿರುಚಿತ್ರವು ಯಾವುದೇ ಅಸಹ್ಯಕರ ಸನ್ನಿವೇಶಗಳನ್ನು ಅಥವಾ ರಾಜಕೀಯ, ಧಾರ್ಮಿಕವಾಗಿ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ವಿವಾದ ಉಂಟುಮಾಡಬಹುದಾದ ಅಂಶಗಳನ್ನು ಒಳಗೊಂಡಿರಬಾರದು. ಕಿರುಚಿತ್ರವು ಸ್ವಂತದಾಗಿರಬೇಕು, ನಕಲು ಕಿರುಚಿತ್ರಗಳನ್ನು ಸಲ್ಲಿಸುವಂತಿಲ್ಲ. ಕಿರುಚಿತ್ರವನ್ನು ಸಲ್ಲಿಸುವಾಗ ಅಭ್ಯರ್ಥಿಗಳು ಹೆಸರು, ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು.
ಸ್ವಚ್ಛ ಭಾರತ್ ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 10,000 ರೂ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನವಾಗಿ 7,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ತೃತೀಯ ಬಹುಮಾನವಾಗಿ 5,000ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.