ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ತಾಲೂಕು ಆಡಳಿತದ ಬಿಗುವಿನ ನಿರ್ಣಯದಿಂದಾಗಿ ಹತ್ತಾರು ವರ್ಷಗಳಿಂದ ಕುಂದಾಪುರದ ನೆಹರೂ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಉಂಟಾಗಿದ್ದ ತಡೆ, ಯಕ್ಷಪ್ರಿಯರ ಸಂಘಟಿತ ಹೋರಾಟದ ಫಲವಾಗಿ ಕೊನೆಗೂ ತೆರವುಗೊಂಡಿದೆ. ಇನ್ನುಮುಂದೆ ನಿರ್ವಿಘ್ನವಾಗಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಕಳೆದ ಕೆಲವು ತಿಂಗಳಿಂದ ಯಕ್ಷಾಭಿಮಾನಿಗಳಲ್ಲಿ ಮುಡುಗಟ್ಟಿದ ಗೊಂದಲ, ಆತಂಕ ದೂರವಾದಂತಾಗಿದೆ.
ಯಕ್ಷಗಾನದ ಪ್ರದರ್ಶನದ ಹಿನ್ನೆಲೆ, ಮಹತ್ವ, ಪ್ರದರ್ಶನಕ್ಕೆ ತಡೆಯುಂಟಾಗಿದ್ದರಿಂದ ಆಗುತ್ತಿರುವ ತೊಂದರೆಗಳ ಬಗೆಗೆ ನಿಮ್ಮ ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣ ಈ ಬಗ್ಗೆ ಸರಣಿ ವರದಿಯನ್ನು ಪ್ರಕಟಿಸಿ ಸಮಸ್ಯೆಯ ಗಂಭೀರತೆಯನ್ನು ಸಂಬಂಧಿಸಿದವರ ಗಮನಕ್ಕೆ ತರುವ ಪ್ರಯತ್ನ ಮಾಡಿ ಯಕ್ಷಪ್ರೀಯರ ಬೆಂಬಲಕ್ಕೆ ನಿಂತಿತ್ತು.
ನೆಹರೂ ಮೈದಾನದ ಪಕ್ಕದ ವಿದ್ಯಾರ್ಥಿಗಳ ಹಾಸ್ಟೆಲ್ಗೆ ತೊಂದರೆಯಾಗಬಹುದು ಹಾಗೂ ಸ್ವಚ್ಛತೆಯ ಕಾರಣವನ್ನೊಡ್ಡಿ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಲಾಗಿತ್ತು. ಆದರೆ ಶನಿವಾರ ಅಥವಾ ಭಾನುವಾರ ಮಾತ್ರವೇ ಯಕ್ಷಗಾನ ಪ್ರದರ್ಶನ ನಡೆಯಲಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗದು, ಸ್ವಚ್ಛತೆಯ ಜವಾಬ್ದಾರಿಯನ್ನು ಸಂಘಟಕರಿಗೆ ವಹಿಸಿದರೆ ತೊಂದರೆಯಾಗದು. ಹತ್ತಾರು ವರ್ಷಗಳಿಂದ ನಡೆದು ಬರುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಏಕಾಏಕಿ ತಡೆಯೊಡ್ಡುವುದು ಸರಿಯಲ್ಲ ಎಂದು ಯಕ್ಷಾಭಿಮಾನಿಗಳು ತಾಲೂಕು ಆಡಳಿತಕ್ಕೆ ಮನವರಿಕೆ ಮಾಡಿದ್ದರು.
ಪತ್ರಕರ್ತ ರಾಮಕೃಷ್ಣ ಹೇರ್ಳೆ ಅವರ ನೇತೃತ್ವದಲ್ಲಿ ಪತ್ರ ಚಳುವಳಿ, ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ಕುಮಾರ್ ನೇತೃತ್ವದಲ್ಲಿ ಯಕ್ಷಾಭಿಮಾನಿಗಳ ಸಮಾವೇಶ, ಈ ಭಾಗದ ಶಾಸಕರು, ಸಂಸದರು, ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳೂ ನಡೆದಿದ್ದವು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಶ್ರೀನಿವಾಸ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನದ ಅನಿವಾರ್ಯತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಅರುಹಲಾಗಿತ್ತು. ಈ ಎಲ್ಲದರ ಪರಿಣಾಮ ತಾಲೂಕು ಆಡಳಿತ ಕೆಲವು ಷರತ್ತುಗಳನ್ನು ವಿಧಿಸಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದೆ.
ವಿದ್ಯಾರ್ಥಿಗಳ ಪರೀಕ್ಷೆಯ ಅವಧಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆಸದಿರುವುದು, ನೆಹರೂ ಮೈದಾನದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಸೇರಿದಂತೆ ಪ್ರಮುಖ ಶರತ್ತುಗಳನ್ನು ವಿಧಿಸಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ.
ಒಟ್ಟಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸೂಕ್ತ ಸ್ಥಳವಿಲ್ಲದೇ ಅತಂತ್ರರಾಗಿದ್ದ ಯಕ್ಷಗಾನ ಸಂಘಟಕರು, ಅದನ್ನೇ ನಂಬಿ ವ್ಯವಹಾರ ನಡೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಸ್ಥರು, ಯಕ್ಷಗಾನ ಪ್ರದರ್ಶನಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ದೊರೆತಿರುವುದು ಸಂತಸವನ್ನುಂಟುಮಾಡಿದ್ದು, ಇದೇ ಶನಿವಾರ ಮೊದಲ ಯಕ್ಷಗಾನ ಪ್ರದರ್ಶನವೂ ಜರುಗಲಿದೆ.
► ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೊರೆಯುತ್ತಿಲ್ಲ ಅನುಮತಿ – http://kundapraa.com/?p=18845
► ಯಕ್ಷಗಾನ ಪ್ರದಶನಕ್ಕೆ ಆಗ್ರಹಿಸಿ ಪತ್ರ ಚಳವಳಿ- http://kundapraa.com/?p=18870
► ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನೀಡದಿದ್ದರೆ ಕಾನೂನು ಸಮರಕ್ಕೂ ಸಿದ್ಧ: ಜಯಪ್ರಕಾಶ್ ಹೆಗ್ಡೆ – http://kundapraa.com/?p=18876
► ಯಕ್ಷಗಾನ ಪ್ರದರ್ಶನ ತಡೆಹಿಡಿದಿರುವ ಬಗ್ಗೆ ಕುಂದಾಪುರದ ಜನಪ್ರತಿನಿಧಿಗಳು, ಗಣ್ಯರು ಏನಂತಾರೆ?- http://kundapraa.com/?p=18870
► ವಲಸೆ ಕಾರ್ಮಿಕರಿಗೆ ನೆಹರೂ ಮೈದಾನವೇ ಆಶ್ರಯತಾಣ – http://kundapraa.com/?p=18944