ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಮಡಿಕಲ್ ಕಡಲ ತೀರದಲ್ಲಿರುವ ಕಾರಣಿಕ ಕೇಂದ್ರ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಪುನರ್ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಫೆ.12ರಿಂದ 20ರ ವರೆಗೆ ಜರುಗಲಿದೆ.
ಒಂಭತ್ತು ದಿನಗಳ ಪರ್ಯಂತ ಪ್ರತಿದಿನ ಧಾರ್ಮಿಕ ಉತ್ಸವಗಳ ಜತೆಗೆ ಕರಾವಳಿ ಉತ್ಸವದ ಶೈಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ತಬ್ಧಚಿತ್ರೋತ್ಸವ, ನಾಟಕೋತ್ಸವ, ನೃತ್ಯೋತ್ಸವ, ಯಕ್ಷೋತ್ಸವ ಹಾಗೂ ಪ್ರದರ್ಶನೋತ್ಸವಗಳು ಸಮುದ್ರ ಕಿನಾರೆಯಲ್ಲಿ ನಿರ್ಮಸಿದ ಶ್ರೀ ಈಶ್ವರ ವೇದಿಕೆಯಲ್ಲಿ ನಡೆಯಲಿದೆ.
ದೇವಳದಲ್ಲಿ ಫೆ.12ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಫೆ.17ಕ್ಕೆ ಶ್ರಿ ದೇವರ ಪ್ರತಿಷ್ಠೆ, ಫೆ.20ಕ್ಕೆ ಬ್ರಹ್ಮಕಲಶಾಭಿಷೇಕ ಹಾಗೂ ಪ್ರತಿದಿನವೂ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಉಡುಪಿ ಭಾರ್ಗವಿ ತಂಡದಿಂದ ನಾಟ್ಯ ವೈಭವ, ಯೇಂಕಾರ್ ಭಟ್ಕಳ ಇವರಿಂದ ನೃತ್ಯ-ಗಾನ-ರೂಪಕ, ಅರೆಹೊಳೆ ಪ್ರತಿಷ್ಠಾನದಿಂದ ನಾಟ್ಯ ವೈಭವ, ಡಾನ್ಸಿಂಗ್ ಇನ್ ದಿ ಡಾರ್ಕ್ ಇವರಿಂದ ಡಾನ್ಸ್ ಧಮಾಕಾ, ಕುಂದಾಪುರ ನೃತ್ಯ ವಸಂತ ತಂಡದಿಂದ ನೃತ್ಯ-ನಾಟ್ಯ-ವೈಭವ, ಬೈಂದೂರು ನಟರಾಜ್ ಡ್ಯಾನ್ಸ್ ಫಿಟ್ನೆಸ್ ಗ್ರೂಪ್ ಇವರಿಂದ ನೃತ್ಯ ಸಿಂಚನ, ಕುಂದಾಪುರ ಕಲಾಸ್ಪೂರ್ತಿ ನಾಟಕ ಸಂಘದಿಂದ ಹಾಸ್ಯಮಯ ನಾಟಕ ಮದಿಮನಿ ಹಾಗೂ ಸಾಲಿಗ್ರಾಮ ಮೇಳದವರಿಂದ ನೂತನ ಪ್ರಸಂಗ ಯಕ್ಷಗಾನ ನಡೆಯಲಿದೆ.
ಸ್ತಬ್ಧಚಿತ್ರಗಳ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಿದ್ದು, ಅಸಕ್ತರು ಸಂಸ್ಥೆಯ ಹೆಸರಿನಲ್ಲಿ, ಭಜನಾ ಮಂದಿರದ ಹೆಸರಿನಲ್ಲಿ ಹಾಗೂ ವೈಯಕ್ತಿಕವಾಗಿ ಕೂಡ ಕಾಲ್ಪನಿಕ, ಮಾದರಿ ಸ್ತಬ್ಧಚಿತ್ರಗಳನ್ನು ನಿಗದಿ ಪಡಿಸಿದ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಒಂಭತ್ತು ದಿನಗಳ ಕಾಲ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಎಲ್ಲಾ ಸ್ತಬ್ಧಚಿತ್ರಗಳ ವ್ಯವಸ್ಥಾಪಕರಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಅಲ್ಲದೇ ಸ್ಪರ್ಧೆಯಲ್ಲಿ ಆಯ್ಕೆಯಾದ ಸ್ತಬ್ಧಚಿತ್ರಗಳಿಗೆ ಪ್ರಥಮ ರೂ.7000, ದ್ವಿತೀಯ ರೂ.4000 ನಗದು ಬಹುಮಾನವನ್ನು ದೇವಸ್ಥಾನದ ವತಿಯಿಂದ ನೀಡಲಾಗುವುದು ಎಂದು ದೇವಸ್ಥಾನದ ಜೀರ್ಣೊದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.