ಕುಂದಾಪ್ರ ಡಾಟ್ ಕಾಂ ಸುದ್ದಿ
ಕಲಬುರಗಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಭಾಗ್ಯ ದೊರೆತಾಗ ಜೀವನ ಯಶಸ್ಸುಗೊಳ್ಳುತ್ತದೆ. ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ದೊರೆತಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಕಲಬುರಗಿ ಮಿನಿವಿಧಾನ ಸೌಧ ಆವರಣದಲ್ಲಿ ಕಲಬುರಗಿ ದಕ್ಷಿಣ ಕನ್ನಡ ಸಂಘ ಆಯೋಜಿಸಿದ್ದ ಮಾಸಿಕ ಸಭೆ ಹಾಗೂ ಚಿತ್ರಕಲಾ ಸ್ಪರ್ಧೆ ಮತ್ತು ಮಾಸ್ಕ್ ವಿತರಣೆ ಕಾರ್ಯಕ್ರಮವನ್ನುಕ್ಕೆ ಚಾಲನೆ ನೀಡಿ ಮಾತನಾಡಿ ಕರಾವಳಿಯಿಂದ ಬಯಲುಸೀಮೆಗೆ ಬಂದು ಒಗ್ಗಟ್ಟಿನಿಂದ ಪ್ರಶಂಸೆಗೆ ಪಾತ್ರರಾಗುವ ರೀತಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಮಕ್ಕಳು ಚಿತ್ರ ರಚನೆಯ ಮೂಲಕ ಕರೋನ ಜಾಗೃತಿ ಸಂದೇಶ ಬಿತ್ತರಿಸುತ್ತಿದ್ದಾರೆ. ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾತ ಹಾಗೂ ಶಿಕ್ಷಣ ನೀಡಿ ಉದ್ಯೋಗ ಲಭಿಸಿ ಸುಂದರ ಜೀವನ ಕಾಣುವತಾಗಬೇಕು ಎಂದರು.
ಬೈಂದೂರು ಕ್ಷೇತ್ರದಲ್ಲಿ ಕನ್ನಡ ಶಾಲೆ ಆರಂಭಕ್ಕೆ ಚಿಂತನೆಯಿದೆ. ಕರೋನದಿಂದ ಕ್ಷೇತ್ರದಲ್ಲೂ 42000 ವಲಸೆ ಕಾರ್ಮಿಕರಿಗೆ ನೆರವು ನೀಡಲಾಗಿದೆ. ಇದರಲ್ಲಿ ನಮ್ಮ ಆಡಳಿತ ಸಂಸ್ಥೆಯ ಶಾಲೆಗಳಲ್ಲಿ ಒಂದು ಕೋಟಿ ರೂಪಾಯಿಯಷ್ಟು ಮೊತ್ತದ ಶಾಲಾ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದರು.
ಮಕ್ಕಳ ಚಿತ್ರಕಲಾ ರಚನಾ ಸ್ಪರ್ಧೆಯಲ್ಲಿ ಒಂದರಿಂದ ಆರು ಹಾಗೂ ಏಳು ವರ್ಷದಿಂದ 14 ವಯಸ್ಸಿನ ಒಟ್ಟು 19ಮಕ್ಕಳು ಪಾಲ್ಗೊಂಡಿದ್ದರು. ಒಂದರಿಂದ ಆರು ವಯಸ್ಸಿನ ವಿಭಾಗದಲ್ಲಿ ಪ್ರಣತಿ ಬಾಬು ರಾವ್ ಯಡ್ರಾಮಿ (ಪ್ರಥಮ ), ಶೈವ್ ಆರ್ ಕಡೇಚೂರ್ (ದ್ವಿತೀಯ ), ಹಾಗೂ ಅಯಾನ್ಸ್ ಎಸ್ ಜತ್ತನ್ (ತೃತೀಯ )ಹಾಗೂ ಎಲರಿಂದ 14ವಯಸ್ಸಿನವರ ವಿಭಾಗದಲ್ಲಿ ಸ್ವಸ್ತಿಕ್ ಪೂಜಾರಿ (ಪ್ರಥಮ ), ತನುಷಾ ಡಿ ಕಡೇಚೂರ್ (ದ್ವಿತೀಯ ) ಮತ್ತು ದಾಮೋದರ ಬಾಳಿಗಾ (ತೃತೀಯ )ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು.
ಚಿತ್ರ ರಚನಾ ಸ್ಪರ್ಧೆಗೆ ಕಲಬುರಗಿ ಜಿಲ್ಲೆ ಯುವಸಬಲೀಕರಣ ಇಲಾಖೆ ಉಪನಿರ್ದೇಶಕರಾದ ಭಾಸ್ಕರ್ ನಾಯ್ಕ್ ಚಿತ್ರ ರಚನೆ ಮೂಲಕ ಚಾಲನೆ ನೀಡಿದರು. ಹಿರಿಯ ಚಿತ್ರ ಕಲಾವಿದ ಸತೀಶ್ ಅಪ್ ಚಂದ್ ತೀರ್ಪುಗರಾರಾಗಿದ್ದರು. ಮಮತಾ ಬಿ ಯಡ್ರಾಮಿ, ಜಹೀರ್ ಅಹಮ್ಮದ್, ಮತ್ತು ಲಕ್ಷ್ಮಿ ಪ್ರಶಾಂತ ಪೈ ಸಹಕರಿಸಿದರು.
ಮಾಸಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಡಾ. ಸದಾನಂದ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಇನ್ನಾ, ಮಹಿಳಾ ಘಟಕದ ಅಧ್ಯಕ್ಷೆ ನ್ಯಾಯವಾದಿ ವಿದ್ಯಾರಾಣಿ ಭಟ್, ರತ್ನಾಕರ್ ಶೆಟ್ಟಿ ಶಹಪುರ್, ಲತಾ ಶ್ರೀನಿವಾಸ ಆಚಾರ್ಯ, ಗಂಗಾಧರ ತಂತ್ರಿ, ನರಸಿಂಹ ಮೆಂಡನ್ ಇದ್ದರು. ಕಾರ್ಯದರ್ಶಿ ಜೀವನ್ ಕುಮಾರ್ ಜತ್ತನ್ ಸ್ವಾಗತಿಸಿದರು. ಶ್ರೀಮತಿ ಬಾಳಿಗಾ ಪ್ರಾರ್ಥನೆ ಗೀತೆ ಹಾಡಿದರು. ಇದೆ ಸಂದರ್ಭದಲ್ಲಿ ಸಂಘದ ನೂತನ ” ಅನ್ನಬ್ರಹ್ಮ ‘ ಯೋಜನೆ ಆರಂಭಕ್ಕೆ ಒಪ್ಪಿಗೆ ನೀಡಿ ಶ್ರೀನಿವಾಸ ಆಚಾರ್ಯ ಸಂಚಾಲಕರಾಗಿ ನೇಮಿಸಲಾಯಿತು. ಇದೆ ಸಂದರ್ಭದಲ್ಲಿ ಭಾರತೀಯ ಆಹಾರ ನಿಗಮದ ನೂತನ ಸದಸ್ಯರಾಗಿ ನೇಮಕಗೊಂಡ ನ್ಯಾಯವಾದಿ ಶಶಿಧರ್ ಮತ್ತು ಸಂಘದ ನಿರ್ಗವಿತ ಅಧ್ಯಕ್ಷ ನರಸಿಂಹ ಮೆಂಡನ್ ಅವರನ್ನು ಸನ್ಮಾನಿಸಲಾಯಿತು.